ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜುಲೈ 21ರಂದು ಅಚಾನಕ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಇಂದು (ಮಂಗಳವಾರ) ಚುನಾವಣೆ ನಡೆಯಲಿದೆ.
ಎನ್ಡಿಎ ಮೈತ್ರಿಕೂಟವು 425 ಸಂಸದರನ್ನು ಹೊಂದಿರುವುದರಿಂದ, ಅವರ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಗೆಲುವು ಬಹುತೇಕ ಖಚಿತವಾಗಿದೆ ಎಂದು ರಾಜಕೀಯ ವಲಯದಲ್ಲಿ ಅಂದಾಜಿಸಲಾಗಿದೆ. ಇವರು, ಇಂಡಿಯಾ ಬ್ಲಾಕ್ನ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ವಿರೋಧ ಪಕ್ಷಗಳು 324 ಸಂಸದರನ್ನು ಹೊಂದಿದ್ದು, ಚುನಾವಣೆ ಉತ್ಸುಕತೆಯಲ್ಲಿದೆ.
ಮತದಾನದ ಮುನ್ನಾದಿನದಂದು, ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ತಮ್ಮ ತಮ್ಮ ಸಂಸದರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ, ಅಣಕು ಮತದಾನ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದವು. ಪ್ರಧಾನಿ ನರೇಂದ್ರ ಮೋದಿ, ಎನ್ಡಿಎ ಸಂಸದರಿಗೆ ಒಂದೇ ಒಂದು ಮತವೂ ವ್ಯರ್ಥವಾಗದಂತೆ ಎಚ್ಚರಿಕೆ ನೀಡಿದರು.
NDA ಅಥವಾ INDIA ಬಣಕ್ಕೆ ಸೇರದ ಪಕ್ಷಗಳಲ್ಲಿ YSRCP (11 ಸದಸ್ಯರು) ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದೆ. ಆದರೆ BJD ಮತ್ತು BRS ಮತದಾನದಿಂದ ದೂರ ಉಳಿಯಲಿವೆ. ಪ್ರಸ್ತುತ ಚುನಾವಣಾ ಕಾಲೇಜಿನ ಬಲ 781 ಆಗಿದ್ದು, ಬಹುಮತದ ಅಂಕೆ 391.
ಇದರ ನಡುವಲ್ಲೇ, RLP ಸಂಸದ ಹನುಮಾನ್ ಬೇನಿವಾಲ್ ಮತ್ತು ಆಜಾದ್ ಸಮಾಜ ಪಕ್ಷದ ಸಂಸದ ಚಂದ್ರಶೇಖರ್ ಆಜಾದ್, ಇಂಡಿಯಾ ಬ್ಲಾಕ್ ಅಭ್ಯರ್ಥಿ ರೆಡ್ಡಿ ಅವರನ್ನು ಭೇಟಿ ಮಾಡಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸದಸ್ಯರು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಂಸತ್ ಭವನದಲ್ಲಿ ಮತ ಚಲಾಯಿಸಲಿದ್ದಾರೆ. ಫಲಿತಾಂಶಗಳನ್ನು ಸಂಜೆ ಘೋಷಿಸಲಾಗುವುದು.