Sports News: ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಜಿಂಬಾಬ್ವೆ ವಿರುದ್ಧ 72 ರನ್ಗಳ ಬೃಹತ್ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ತನ್ನ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದ್ದರೆ, ಸತತ ಎರಡನೇ ಸೋಲು ಅನುಭವಿಸಿದ ಜಿಂಬಾಬ್ವೆ ಟೂರ್ನಿಯಿಂದ ಹೊರಬಿದ್ದಿದೆ.
ಸಿಡಿದ ಭಾರತೀಯ ಬ್ಯಾಟರ್ಗಳು: ಬೃಹತ್ ಮೊತ್ತದ ಗುರಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ಭಾರತಕ್ಕೆ ಆರಂಭಿಕ ಆಟಗಾರರು ಭದ್ರ ಬುನಾದಿ ಹಾಕಿಕೊಟ್ಟರು. ಸಂಜು ಸ್ಯಾಮ್ಸನ್ ಮತ್ತು ಯುವ ಆಟಗಾರ ಅಭಿಷೇಕ್ ಶರ್ಮಾ ಮೊದಲ ವಿಕೆಟ್ಗೆ 48 ರನ್ ಸೇರಿಸಿದರು. ಸಂಜು (24) ಔಟಾದ ಬಳಿಕ ಕ್ರೀಸ್ಗೆ ಬಂದ ಇಶಾನ್ ಕಿಶನ್, ಅಭಿಷೇಕ್ ಜೊತೆಗೂಡಿ ಸ್ಫೋಟಕ ಆಟವಾಡಿದರು.
ಅಭಿಷೇಕ್ ಶರ್ಮಾ ಕೇವಲ 26 ಎಸೆತಗಳಲ್ಲಿ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಅರ್ಧಶತಕ ಪೂರೈಸಿದರು. ಒಟ್ಟಾರೆ 30 ಎಸೆತ ಎದುರಿಸಿದ ಅವರು 4 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 55 ರನ್ ಗಳಿಸಿದರು. ಇಶಾನ್ ಕಿಶನ್ 38 ರನ್ ಕಾಣಿಕೆ ನೀಡಿ ನಿರ್ಗಮಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 13 ಎಸೆತಗಳಲ್ಲಿ 33 ರನ್ ಸಿಡಿಸಿ ಪಂದ್ಯದ ಗತಿಯನ್ನು ಬದಲಿಸಿದರು.
ಹಾರ್ದಿಕ್ – ತಿಲಕ್ ವರ್ಮಾ ಅಬ್ಬರ
ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಜಿಂಬಾಬ್ವೆ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಇವರಿಬ್ಬರು ಅಜೇಯ 84 ರನ್ಗಳ ಪಾಲುದಾರಿಕೆ ಹಂಚಿಕೊಂಡಿದ್ದರಿಂದ ಭಾರತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ಗಳ ಬೃಹತ್ ಮೊತ್ತ ಪೇರಿಸಿತು.
- ಹಾರ್ದಿಕ್ ಪಾಂಡ್ಯ: 23 ಎಸೆತಗಳಲ್ಲಿ ಅಜೇಯ 50 ರನ್ (4 ಸಿಕ್ಸರ್, 2 ಬೌಂಡರಿ)
- ತಿಲಕ್ ವರ್ಮಾ: 16 ಎಸೆತಗಳಲ್ಲಿ ಅಜೇಯ 44 ರನ್ (4 ಸಿಕ್ಸರ್, 3 ಬೌಂಡರಿ)
ಜಿಂಬಾಬ್ವೆ ಹೋರಾಟ ಮತ್ತು ಬೆನೆಟ್ ಏಕಾಂಗಿ ಪ್ರದರ್ಶನ
257 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡಕ್ಕೆ ಆರಂಭದಲ್ಲಿ ಭಾರತೀಯ ಬೌಲರ್ಗಳು ಕಡಿವಾಣ ಹಾಕಿದರು. ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಆರಂಭಿಕ ವಿಕೆಟ್ಗಳನ್ನು ಪಡೆಯುವ ಮೂಲಕ ಜಿಂಬಾಬ್ವೆಯನ್ನು ಒತ್ತಡಕ್ಕೆ ಸಿಲುಕಿಸಿದರು. ನಾಯಕ ಸಿಕಂದರ್ ರಜಾ (31 ರನ್) ಮತ್ತು ಬ್ರಿಯಾನ್ ಬೆನೆಟ್ 72 ರನ್ ಸೇರಿಸಿ ಚೇತರಿಕೆ ನೀಡಲು ಪ್ರಯತ್ನಿಸಿದರಾದರೂ, ಅರ್ಷದೀಪ್ ಸಿಂಗ್ 17ನೇ ಓವರ್ನಲ್ಲಿ ಸತತ ವಿಕೆಟ್ ಪಡೆಯುವ ಮೂಲಕ ಜಿಂಬಾಬ್ವೆಯ ಆಸೆಯನ್ನು ಕಮರಿಸಿದರು.
ಜಿಂಬಾಬ್ವೆ ಪರ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಅದ್ಭುತ ಆಟವಾಡಿದರು. ಕ್ರೀಸ್ನ ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಎದೆಗುಂದದ ಅವರು 59 ಎಸೆತಗಳಲ್ಲಿ ಅಜೇಯ 97 ರನ್ (8 ಬೌಂಡರಿ, 6 ಸಿಕ್ಸರ್) ಚಚ್ಚಿದರು. ಕೇವಲ 3 ರನ್ಗಳಿಂದ ಶತಕ ವಂಚಿತರಾದ ಬೆನೆಟ್ ಅವರ ಹೋರಾಟದ ಹೊರತಾಗಿಯೂ ಜಿಂಬಾಬ್ವೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಬೌಲಿಂಗ್ ಪ್ರದರ್ಶನ:
- ಅರ್ಷದೀಪ್ ಸಿಂಗ್: ನಿರ್ಣಾಯಕ ಹಂತದಲ್ಲಿ ವಿಕೆಟ್ ಕಿತ್ತು ಜಿಂಬಾಬ್ವೆಗೆ ಬ್ರೇಕ್ ಹಾಕಿದರು.
- ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ: ಮಧ್ಯಮ ಓವರ್ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕಿದರು.
- ಶಿವಂ ದುಬೆ: ಒಂದು ವಿಕೆಟ್ ಪಡೆದು ಸಾಥ್ ನೀಡಿದರು.
ಸೆಮಿಫೈನಲ್ ಲೆಕ್ಕಾಚಾರ: ವೆಸ್ಟ್ ಇಂಡೀಸ್ ವಿರುದ್ಧ ಮಾಡು ಇಲ್ಲವೇ ಮಡಿ!
ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಭಾರತ ತಂಡ ತನ್ನ ಮುಂದಿನ ಹಾಗೂ ಕೊನೆಯ ಪಂದ್ಯದಲ್ಲಿ ಪ್ರಬಲ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ‘ಕ್ವಾರ್ಟರ್ ಫೈನಲ್’ ನಂತಾಗಿದ್ದು, ಗೆದ್ದ ತಂಡ ನೇರವಾಗಿ ಸೆಮಿಫೈನಲ್ಗೆ ಲಗ್ಗೆ ಇಡಲಿದೆ. ಪ್ರಸ್ತುತ ಫಾರ್ಮ್ ನೋಡಿದರೆ ಭಾರತ ತಂಡವು ವಿಂಡೀಸ್ ವಿರುದ್ಧವೂ ಅಬ್ಬರಿಸುವ ಸೂಚನೆ ನೀಡಿದೆ.