ಧಾರವಾಡ/ಗರಗ:
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಅಪ್ರಾಪ್ತ ಬಾಲಕಿಯೊಬ್ಬಳಿಗೆ ಪ್ರೀತಿಯ ಜಾಲದ ಹೆಸರಿನಲ್ಲಿ ಬಲೆಗೆ ಬೀಳಿಸಿ, ಮಾನಸಿಕ ಕಿರುಕುಳ ನೀಡಿ ಆಕೆಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಾನೂನು ವ್ಯವಸ್ಥೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ತೀವ್ರವಾಗಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿದ ಶ್ರೀಗಳು, ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿದರು. ತದನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಘಟನೆಯ ಹಿಂದಿರುವ ಆಘಾತಕಾರಿ ವಿವರಗಳನ್ನು ಹಂಚಿಕೊಂಡು “ಅಪ್ರಾಪ್ತ ಬಾಲಕಿಯ ಚಲನವಲನಗಳನ್ನು ಹಲವು ದಿನಗಳಿಂದ ಗಮನಿಸಿದ ವ್ಯಕ್ತಿಯೊಬ್ಬ ಆಕೆಯನ್ನು ಪ್ರೇಮದ ಬಲೆಗೆ ಬೀಳಿಸಿಕೊಳ್ಳಲು ಯತ್ನಿಸಿದ್ದಾನೆ. ಅದು ಫಲಕಾರಿಯಾಗದಿದ್ದಾಗ, ಆತನ ಸ್ನೇಹಿತ ಬಾಲಕಿಯ ಮತಿಗೆಡಿಸಿ, ವೈವಾಹಿಕ ಜೀವನದ ರೀತಿಯಲ್ಲಿ ಆಕೆಯನ್ನು ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಬಾಲಕಿಯ ಛಾಯಚಿತ್ರಗಳನ್ನು (ಫೋಟೋಗಳನ್ನು) ಸಂಗ್ರಹಿಸಿ ತೀವ್ರ ಮಾನಸಿಕ ಕಿರುಕುಳ ನೀಡಿದ್ದಾನೆ. ಈ ಕಿರುಕುಳವನ್ನು ತಾಳಲಾರದೆ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ” ಎಂದು ಶ್ರೀಗಳು ವಿಷಾದಿಸಿದರು.
“ಸಮಾಜದಲ್ಲಿ ಇಂತಹ ವಿಕೃತ ಪ್ರಕರಣಗಳು ಮರುಕಳಿಸಬಾರದು. ಅರಳುವ ಮನಸ್ಸುಗಳು ಹೀಗೆ ಬಾಡಿ ಹೋಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹ ಕೃತ್ಯ ಎಸಗುವ ಕಾಮುಕರಿಗೆ ಕಾನೂನು ವ್ಯವಸ್ಥೆಯಡಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಸ್ವಾಮೀಜಿ ಒತ್ತಾಯಿಸಿದರು.
ನೊಂದ ಕುಟುಂಬದ ಪರವಾಗಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸರ್ಕಾರಕ್ಕೆ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಇಟ್ಟಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ನೊಂದ ಬಾಲಕಿಯ ಕುಟುಂಬಕ್ಕೆ ತಕ್ಷಣವೇ 8 ಲಕ್ಷ ರೂಪಾಯಿಗಳ ಪರಿಹಾರ ಧನ ಬಿಡುಗಡೆ ಮಾಡಬೇಕು. ಮೃತರ ಕುಟುಂಬದ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮೃತ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ಕಷ್ಟದ ಅವಧಿಯನ್ನು ಭರಿಸುವ ಶಕ್ತಿ ಆಕೆಯ ಕುಟುಂಬಸ್ಥರಿಗೆ ಸಿಗಲಿ ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp:
https://whatsapp.com/channel/0029VbDbOsBD8SE2H0L3d40j
