ಅನ್ನಭಾಗ್ಯದ ಬದಲು ‘ಇಂದಿರಾ ಆಹಾರ ಕಿಟ್’: ಬಿಪಿಎಲ್ ಕಾರ್ಡುದಾರರಿಗೆ ರಾಜ್ಯ ಸರ್ಕಾರದ ಹೊಸ ಗಿಫ್ಟ್!

ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ವಿತರಣಾ ವ್ಯವಸ್ಥೆಯಲ್ಲಿ (PDS) ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯ ‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ನೀಡಲಾಗುತ್ತಿದ್ದ ಹೆಚ್ಚುವರಿ ೫ ಕೆ.ಜಿ ಅಕ್ಕಿಯನ್ನು ರದ್ದುಪಡಿಸಿ, ಅದರ ಬದಲಾಗಿ ಪೌಷ್ಟಿಕಾಂಶಯುಕ್ತ ‘ಇಂದಿರಾ ಆಹಾರ ಕಿಟ್’ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಈ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಆದರೆ, ಇದೀಗ ಮರಳಿ ಅದೇ ನಿರ್ಧಾರಕ್ಕೆ ಬಂದಿರುವ ಸರ್ಕಾರ, ಅನ್ನಭಾಗ್ಯದ ಹೆಚ್ಚುವರಿ ಅಕ್ಕಿಯ ಬದಲಿಗೆ ದಿನಸಿ ವಸ್ತುಗಳನ್ನು ನೀಡಲು ಅಂತಿಮ ತೀರ್ಮಾನ ಕೈಗೊಂಡಿದೆ.

ನಿರ್ಧಾರ ಬದಲಾವಣೆಗೆ ಪ್ರಮುಖ ಕಾರಣಗಳೇನು?

ಅಕ್ಕಿಯ ಬದಲಾಗಿ ಕಿಟ್ ನೀಡುವ ಸರ್ಕಾರದ ಈ ನಿರ್ಧಾರದ ಹಿಂದೆ ಹಲವು ಪ್ರಮುಖ ಕಾರಣಗಳಿವೆ:

  • ಕಾಳಸಂತೆಗೆ ಕಡಿವಾಣ: ಸರ್ಕಾರ ವಿತರಿಸುತ್ತಿರುವ ಉಚಿತ ಅಕ್ಕಿ ಅರ್ಹ ಬಡವರನ್ನು ತಲುಪುವ ಬದಲು ಕಾಳಸಂತೆಕೋರರ ಪಾಲಾಗುತ್ತಿದೆ ಹಾಗೂ ದುರುಪಯೋಗವಾಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ.
  • ಪೌಷ್ಟಿಕಾಂಶದ ಕೊರತೆ ನೀಗಿಸುವಿಕೆ: ಕೇವಲ ಅಕ್ಕಿಯನ್ನು ಮಾತ್ರ ನೀಡುವುದಕ್ಕಿಂತ, ದೈನಂದಿನ ಅಡುಗೆಗೆ ಅಗತ್ಯವಾದ ಬೇಳೆ, ಎಣ್ಣೆಯಂತಹ ವಸ್ತುಗಳನ್ನು ನೀಡುವುದರಿಂದ ಬಡ ಕುಟುಂಬಗಳ ಪೌಷ್ಟಿಕಾಂಶದ ಮಟ್ಟ ಸುಧಾರಿಸಲಿದೆ.
  • ಆರ್ಥಿಕ ಹೊರೆ ಕಡಿತ: ಈ ದಿನಸಿ ಕಿಟ್ ವಿತರಣೆಯ ಯೋಜನೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 300 ಕೋಟಿ ರೂಪಾಯಿಗಳಿಗೂ ಅಧಿಕ ಉಳಿತಾಯವಾಗುವ ನಿರೀಕ್ಷೆಯಿದೆ.
  • ಕುಟುಂಬ ನಿರ್ವಹಣೆಗೆ ಆಸರೆ: ಉಪ್ಪು, ಸಕ್ಕರೆ, ಬೇಳೆಯಂತಹ ಅಗತ್ಯ ವಸ್ತುಗಳು ಉಚಿತವಾಗಿ ಸಿಗುವುದರಿಂದ ಬಡ ಕುಟುಂಬಗಳ ಮಾಸಿಕ ಖರ್ಚು ಕಡಿಮೆಯಾಗಿ, ನಿರ್ವಹಣೆ ಸುಲಭವಾಗಲಿದೆ.

‘ಇಂದಿರಾ ಆಹಾರ ಕಿಟ್’ ನಲ್ಲಿ ಏನೇನಿರಲಿದೆ?

ರಾಜ್ಯದ ಅಂದಾಜು 1.26ಕೋಟಿ ಬಿಪಿಎಲ್ ಕುಟುಂಬಗಳ ಒಟ್ಟು 4.48 ಕೋಟಿ ಫಲಾನುಭವಿಗಳಿಗೆ ಈ ಹೊಸ ಯೋಜನೆ ತಲುಪಲಿದೆ. ಈ ಕಿಟ್‌ನಲ್ಲಿ ಈ ಕೆಳಗಿನ ವಸ್ತುಗಳು ಇರಲಿವೆ:

  • ತೊಗರಿಬೇಳೆ ಅಥವಾ ಹೆಸರುಬೇಳೆ
  • ಅಡುಗೆ ಎಣ್ಣೆ
  • ಸಕ್ಕರೆ
  • ಉಪ್ಪು

ಸದಸ್ಯರ ಸಂಖ್ಯೆ ಆಧಾರದ ಮೇಲೆ ವಿತರಣೆ

ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕಿಟ್‌ನ ವಸ್ತುಗಳನ್ನು ಹಂತ-ಹಂತವಾಗಿ ವಿತರಿಸಲಾಗುತ್ತದೆ. ಅದರ ವಿವರ ಹೀಗಿದೆ:

ಕುಟುಂಬದ ಸದಸ್ಯರ ಸಂಖ್ಯೆವಿತರಿಸುವ ಪ್ರಮಾಣ (ಪ್ರತಿ ವಸ್ತುವಿಗೆ)
1 ರಿಂದ2 ಸದಸ್ಯರು0.5 ಕೆ.ಜಿ / ಲೀಟರ್
3ರಿಂದ 4 ಸದಸ್ಯರು1 ಕೆ.ಜಿ / ಲೀಟರ್
5 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರು1.5 ಕೆ.ಜಿ / ಲೀಟರ್

ಯೋಜನೆಯ ಹಿನ್ನೆಲೆ:

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ‘ಪಂಚ ಗ್ಯಾರಂಟಿ’ಗಳು ಪ್ರಮುಖ ಪಾತ್ರ ವಹಿಸಿದ್ದವು. ಅದರಲ್ಲೂ ‘ಅನ್ನಭಾಗ್ಯ’ ಅತಿ ಹೆಚ್ಚು ಜನಮನ್ನಣೆ ಗಳಿಸಿತ್ತು. ಆರಂಭದಲ್ಲಿಯೇ ಹೆಚ್ಚುವರಿ ಅಕ್ಕಿಯ ಬದಲಾಗಿ ದಿನಸಿ ಕಿಟ್ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿತ್ತಾದರೂ, ಟೆಂಡರ್ ಪ್ರಕ್ರಿಯೆಯ ವಿಳಂಬದಿಂದಾಗಿ ಅದು ನೆನೆಗುದಿಗೆ ಬಿದ್ದಿತ್ತು. ಬಳಿಕ, ಕಿಟ್ ಪ್ರಸ್ತಾವನೆ ಕೈಬಿಟ್ಟು 10 ಕೆ.ಜಿ ಅಕ್ಕಿಯನ್ನೇ ಮುಂದುವರಿಸಲು ಚಿಂತಿಸಲಾಗಿತ್ತು. ಆದರೆ, ಪ್ರಸ್ತುತ ಕಾಳಸಂತೆಯ ಹಾವಳಿ ಮತ್ತು ಪೌಷ್ಟಿಕಾಂಶದ ಅಗತ್ಯವನ್ನು ಅರಿತು ಅಂತಿಮವಾಗಿ ‘ಇಂದಿರಾ ಆಹಾರ ಕಿಟ್’ ಜಾರಿಗೆ ಸರ್ಕಾರ ಒಲವು ತೋರಿದೆ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *