ಚಿತ್ರದುರ್ಗ ಆ. 05
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಮತದಾರರ ಹಕ್ಕುಗಳ ಸಂರಕ್ಷಣೆ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮತ ಕಾವಲು ಕಾನೂನು ಸಮಿತಿ ನಾಗರೀಕ ಮತ ಕಾವಲು ಸಮಿತಿವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.
ಚಿತ್ರದುರ್ಗ ನಗರದ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು, ಎಸ್ಐಆರ್ ಕರ್ನಾಟಕದಲ್ಲಿ ಬಿಹಾರ ಮತ್ತು ಬಂಗಾಳಕ್ಕಿಂತಲೂ ಹೆಚ್ಚಿನ ಅವಾಂತರಗಳನ್ನು ಅನಾಹುತಗಳನ್ನು ತಂದೊಡ್ಡುವುದು ನಿಚ್ಚಳವಾಗಿದೆ. ಮನೆ ಮನೆಗೆ ಹೋಗಿ ಮತ ಪರಿಶೀಲನೆ ಮಾಡುವ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ತಲುಪಿದೆ. ಅಘಾತಕಾರಿ ಅಂಕಿ ಅಂಶಗಳನ್ನು ಸ್ವತಃ ಚುನಾವಣಾ ಆಯೋಗ ಪ್ರಕಟಿಸಿದೆ. ರಾಜ್ಯದ 1 ಕೋಟಿ 10 ಲಕ್ಷ [1,10,59,288] ಮತದಾರರು ಡಿಲೀಟ್ ಪಟ್ಟಿಯಲ್ಲಿ ಇದ್ದಾರೆ. ಅಂದರೆ ರಾಜ್ಯದ 20% [19.95] ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಅಂದರೆ ಪ್ರತಿ ಐದು ಜನರಲ್ಲಿ ಒಬ್ಬರು ಪಟ್ಟಿಯಿಂದ ಹೊರಹೋಗುವ ಎಲ್ಲಾ ಸಾಧ್ಯತೆಗಳೂ ಇವೆ. ಬೆಂಗಳೂರಿನ ಮತದಾರರ ಪಟ್ಟಿಯಲ್ಲಿನ 40% ಮಂದಿ ಕಾಣೆಯಾಗಲಿದ್ದಾರೆ. ಗಡಿ ಭಾಗಗಳಲ್ಲಿರುವ ಹಾಗೂ ವಲಸೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿಯೂ ಬೃಹತ್ ಸಂಖ್ಯೆಯ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದಿದೆ.
ಚುನಾವಣಾ ಆಯೋಗದ ಪ್ರಕಾರ ಮ್ಯಾಪಿಂಗ್ ಆಗದವರ ಸಂಖ್ಯೆ 34 ಲಕ್ಷ ಜನ. ಇವರೆಲ್ಲರಿಗೂ ನೋಟೀಸ್ ಬರಲಿದೆ. ಇದು ಆಲ್ಟಾರಿದಂ ಮೇಲೆ ಕೆಲಸ ಮಾಡುತ್ತದೆ. ಅಂದರೆ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ತಾಳ ದೆಹಲಿಯ ಕೈಗಳಲ್ಲಿ ಇದೆ. ಇದೊಂದು ರೀತಿಯ ಟ್ರಂಪ್ ಕಾರ್ಡ್. ಬಂಗಾಳದಲ್ಲಿ ಅತಿಹೆಚ್ಚಿನ ಅವಾಂತರ ಸೃಷ್ಟಿಸಿದ್ದು, ಈಗ ಹಾಲಿ 34 ಲಕ್ಷ ಜನ ಎಲ್ಲಾ ದಾಖಲೆಗಳಿದ್ದರೂ ಮತದಾನದ ಹಕ್ಕು ಇಲ್ಲದೆ ನ್ಯಾಯಲಯಕ್ಕೆ ಅಲಿಯುತ್ತಿರುವುದು ಇದರಿಂದಲೇ. ಈ ಸರ್ಪವೂ ಕರ್ನಾಟಕವನ್ನು ಕಚ್ಚಲಿದೆ. ಎಷ್ಟು ವಿಷ ಕಕ್ಕಬೇಕು ಎಂಬುದನ್ನು ದಿಲ್ಲಿ ದೊರೆಗಳು ಎಲ್ಲಾ ಪ್ರಕ್ರಿಯೆ ನೋಡಿಕೊಂಡು ತೀರ್ಮಾನ ಮಾಡುತ್ತಾರೆ ಎಂದು ದೂರಿದ್ದಾರೆ.
ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರನ್ನು ಕಾನೂನುಬಾಹಿರವಾಗಿ ಅಥವಾ ಏಕಪಕ್ಷೀಯವಾಗಿ ತೆಗೆದುಹಾಕದಂತೆ ಕ್ರಮ ಕೈಗೊಳ್ಳಬೇಕು. ಹೆಸರು ತೆಗೆದುಹಾಕುವ ಮೊದಲು ಸಂಬಂಧಪಟ್ಟ ಮತದಾರರಿಗೆ ಸಮರ್ಪಕ ನೋಟಿಸ್ ನೀಡಿ, ಅವರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು. ಬೂತ್ ಮಟ್ಟದ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಮತದಾರರಿಗೆ ತಮ್ಮ ಹೆಸರು ಪರಿಶೀಲಿಸಲು ಹಾಗೂ ಅಗತ್ಯವಿದ್ದರೆ ತಿದ್ದುಪಡಿ ಮಾಡಿಸಿ ಕೊಳ್ಳಲು ವಿಶೇಷ ಶಿಬಿರಗಳನ್ನು ಆಯೋಜಿಸಬೇಕು. ಮೂಲಾಧಾರವಾಗಿರುವುದರಿಂದ, ಮತದಾನದ ಹಕ್ಕು ಸಂವಿಧಾ ನಾತ್ಮಕ ಪ್ರಜಾಪ್ರಭುತ್ವದ ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಜಿಲ್ಲಾಡ ಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮತದಾರರ ಹಕ್ಕುಗಳ ಸಂರಕ್ಷಣೆ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಕ್ರಮ ಕೈಗೊಳ್ಳು ಬೇಕು ಹಾಗೂ ಭಾರತದ ಸಂವಿಧಾನದ ಆಶಯಗಳಿಗೆ ಅನುಗುಣ ವಾಗಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಮಹಮ್ಮದ್ ಸಿರಾಜ್ದ್ದೀನ್ ಮಹಬೂಬ್ ಪಾಷ, ಸಾಧಿಕ್, ರಾಮಬಾಬು, ಮಹಮ್ಮದ್ ಆತೀಕ್, ಅಶೋಕ್ ಬೆಳಘಟ್ಟ ಸಮಾಜ ಸೇವಕರಾದ ಖಾಸಿಂ ಆಲಿ, ಮಹಮ್ಮದ್ ಆಲಿ ಹಾಗೂ ಷಫೀವುಲ್ಲಾ ಭಾಗವಹಿಸಿದ್ದರು.