ವರದಿ ಮತ್ತು ಫೋಟೋ ಕೃಪೆ, ರವಿ ಕೆ.ಅಂಬೇಕರ್
ಹಿರಿಯೂರು/ಯರಬಳ್ಳಿ: ಏಪ್ರಿಲ್_01
ಒಬ್ಬ ಶಿಕ್ಷಕನ ವಯೋನಿವೃತ್ತಿ ಎನ್ನುವುದು ಕೇವಲ ಸೇವೆಯ ಅಂತ್ಯವಲ್ಲ; ಅದು ಒಂದು ಸುದೀರ್ಘ ಜ್ಞಾನದ ಪಯಣದ ಸಾರ್ಥಕ ಕ್ಷಣವಾಗಿದೆ ಸರ್ಕಾರಿ ಸೇವೆಯಲ್ಲಿರುವ ಪ್ರತಿಯೊಬ್ಬರ ಜೀವನದಲ್ಲಿ ಇಂತಹ ಒಂದು ಭಾವನಾತ್ಮಕ ಕ್ಷಣ ಬರುತ್ತದೆ ಇದು ಮರಳಿ ಅರಳುವ ಕಾಲ ಎಂದು ಯರಬಳ್ಳಿ ಮುಖ್ಯ ಶಿಕ್ಷಕ ನಾಗರಾಜ್ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಸೋಮವಾರ ವೃತ್ತಿಯಿಂದ ವಯೋನಿವೃತ್ತಿ ಹೊಂದಿದ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಪಿಎಂಶ್ರೀ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಹಿರಿಯ ಶಿಕ್ಷಕ ನೀಲಕಂಠೇಶ್ ಹಾಗೂ ಅಡುಗೆ ಸಿಬ್ಬಂದಿ ಮಂಜಮ್ಮ ಅವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ನಿವೃತ್ತರಿಗೆ ಸನ್ಮಾನ ನೀಡಿ ಮಾತನಾಡುತ್ತಾ ಅವರ ಸೇವೆಯನ್ನು ಶಾಲೆಯ ಎಲ್ಲಾ ಸಿಬ್ಬಂದಿ ಮಕ್ಕಳು ಸೇರಿದಂತೆ ಗ್ರಾಮದ ಜನರು ಎಂದೆಂದಿಗೂ ನೆನೆಯುತ್ತಾರೆ ಅವರ ಹೊಸ ಬದುಕಿಗೆ ಶುಭವಾಗಲಿ ಎಂದು ಸನ್ಮಾನ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ನಿವೃತ್ತ ಶಿಕ್ಷಕ ನೀಲಕಂಠೇಶ್ ಈ ಶಾಲೆಗೆ ನನ್ನ ಅಳಿಲು ಸೇವೆಯ ನಂತರ ನಾನು ನಿವೃತ್ತಿ ಹೊಂದಿ ಹೊರಡುತ್ತಿರುವ ಈ ಕ್ಷಣ ನಾನು ನಿಮ್ಮಗಳ ಜೊತೆ ಕಳೆದ ಸುಂದರ ಕ್ಷಣಗಳನ್ನು ನೆನೆದು ನನ್ನ ಮನಸ್ಸು ಭಾರವಾಗುತ್ತಿದೆ ಇಲ್ಲಿ ಕಳೆದ ದಿನಗಳು ನನ್ನ ಜೀವನದ ಅತ್ಯಂತ ಮಹತ್ವದ ನೆನಪುಗಳಾಗಿವೆ ಇನ್ನೂ ನನ್ನ ಪ್ರೀತಿಯ ಮಕ್ಕಳೇ ನೀವು ನನ್ನ ಬಳಿ ಕಲಿತಿದ್ದೀರಿ ಎಂದು ಭಾವಿಸುವುದಕ್ಕಿಂತಲೂ ಹೆಚ್ಚು, ನೀವು ನನಗೆ ಕಲಿಸಿದ್ದೀರಿ ಎಂದು ಭಾವಿಸುತ್ತೇನೆ ನಿಮ್ಮ ಉತ್ಸಾಹ ಮತ್ತು ಕಲಿಕೆಯ ಇಚ್ಛೆ ನನ್ನನ್ನು ಶ್ರೇಷ್ಠ ಶಿಕ್ಷಕನನ್ನಾಗಿ ಮಾಡಿದವು. ಭವಿಷ್ಯದಲ್ಲಿ ನೀವು ಎಲ್ಲಾ ಸವಾಲುಗಳನ್ನು ಎದುರಿಸಿ, ಸಮಾಜಕ್ಕೆ ಧನಾತ್ಮಕ ಪ್ರಭಾವ ಬೀರಿ ಎಂದು ನಾನು ಆಶಿಸುತ್ತೇನೆ ಎಂದು ಮಕ್ಕಳಿಗೆ ಹಿತನುಡಿ ಹೇಳಿದರು.


ಇದೇ ಸಂಧರ್ಭದಲ್ಲಿ ಮಾತನಾಡಿದ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತ ಅತ್ಯಂತ ಶಿಸ್ತಿನ ಶಿಕ್ಷಕರಾದ ಪಾಟೀಲ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಯರಬಳ್ಳಿ ಗ್ರಾಮದ ಅತ್ಯಂತ ಪ್ರೀತಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಸಮಯ ಪರಿಪಾಲನೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಾ ಬಂದಿದ್ದು ನೀಲಕಂಠೇಶ್ ಅವರ ಮುಂದಿನ ಜೀವನ ಉತ್ತಮ ಆರೋಗ್ಯ, ನೆಮ್ಮದಿ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದ ಈ ಭಾವನಾತ್ಮಕವಾಗಿದ್ದ ಈ ಬೀಳ್ಕೊಡುಗೆ ಸಮಾರಂಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಮಧುಸೂದನ್,ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ನಾಯ್ಕ, ಜಿಲ್ಲಾ ಸಹ ಕಾರ್ಯದರ್ಶಿ ಶಿವಮೂರ್ತಿ, ಸಂಘದ ನಿರ್ದೇಶಕ ಶಂಕರ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು, ಮಕ್ಕಳು ಸಿಬ್ಬಂದಿ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಪಾಲ್ಗೊಂಡಿದ್ದರು.