ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಗೌರವ ಸನ್ಮಾನ
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 13
ಚಿತ್ರದುರ್ಗ ತಾಲೂಕು ಗಾಣಿಗ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದಂತಹ ಸಾಧಕರಿಗೆ ಅಭಿನಂದನಾ ಸಮಾರಂಭವೂ ಎಪಿಎಂಸಿಯಾರ್ಡ್ನಲ್ಲಿನ ಶ್ರೀಕಂಠೇಶ್ವರ ದಲಾಲಿ ಮಂಡಿಯಲ್ಲಿ ಸೋಮವಾರ ಸಂಜೆ ಜರುಗಿತು.
ಕರ್ನಾಟಕ ರಾಜ್ಯ ಕುಕ್ಕುಟ ಮಹಾಮಂಡಳಿಯ ನಿರ್ದೇಶಕರಾಗಿ ಭರಮಸಾಗರದ ರುದ್ರಮುನಿ, ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಎನ್ ಟಿ ಬಸವರಾಜು, ಚಿತ್ರದುರ್ಗ ಹಾಪ್ ಕಾಮ್ಸ್ ನಿರ್ದೇಶಕರಾಗಿ ಎನ್ ಹೆಚ್ ಮಂಜುನಾಥ್ ನೀಲಕಂಠ ವೀರಶೈವ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾಗಿ ನೀಲಕಂಠ ಹಾಗೂ ಶ್ರೀಮತಿ ಶೈಲಜಾ ಪ್ರಶಾಂತ್ರವರನ್ನು ಜಿಲ್ಲಾ ಗಾಣಿಗ ಸಮುದಾಯದ ಪರವಾಗಿ ಗೌರವದಿಂದ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನುವಹಿಸಿದ್ದ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಕೆ ಟಿ ಬಸಣ್ಣ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,ಗಾಣಿಗ ಸಮುದಾಯ ಅಸಂಘಟಿತ ಸಮಾಜವಾಗಿದೆ. ಶತಶತಮಾನ ಗಳಿಂದಲೂ ಕೃಷಿ, ವ್ಯವಹಾರ, ಶಿಕ್ಷಣ, ರಾಜಕೀಯ ಮುಂತಾದ ಕ್ಷೇತ್ರಗಳಿಗೆ ತಮ್ಮ ಅಮೂಲ್ಯವಾದ ಕೊಡುಗೆ ಯನ್ನು ನೀಡುತ್ತಾ ಬಂದಿದ್ದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಘಟಿತರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳದೆ ಅನಾಥರಂತೆ ಬದುಕುತ್ತಿದ್ದಾರೆ. ನಮ್ಮ ಸಮುದಾಯದವರು ಈ ಭಾಗದಲ್ಲಿ ಜನಸಂಖ್ಯೆಯಲ್ಲಿ ತುಂಬಾ ಕಡಿಮೆ ಇದ್ದು, ಸಮಾಜದ ಏಳಿಗೆಗಾಗಿ ಒಂದುಗೂಡಬೇಕಾಗಿದೆ. ಆ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ನಮ್ಮ ಸಮಾಜಕ್ಕೆ ಶಕ್ತಿಯನ್ನು ತುಂಬಬೇಕಿದೆ ಎಂದು ಸಮುದಾಯಕ್ಕೆ ಕರೆಕೊಟ್ಟರು.
ಗೌರವ ಸನ್ಮಾನ ಸ್ವೀಕರಿಸಿದ ಸನ್ಮಾನಿತರು ನಮ್ಮ ನಮ್ಮ ಕ್ಷೇತ್ರಗಳಿಗೆ ತಕ್ಕಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದರ ಮೂಲಕ ನ್ಯಾಯ ಒದಗಿಸುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಗಾಣಿಗ ಸಮುದಾಯದ ಸಂಘಟನೆ ಹಾಗೂ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಚಿತ್ರದುರ್ಗ ತಾಲೂಕು ಗಾಣಿಗ ಸಂಘದ ನಿರ್ದೇಶಕರಾದ ವರದಾ ಶಂಕರ್ ಪ್ರಾರ್ಥಿಸಿದರೆ, ಸಂಘದ ಕಾರ್ಯದರ್ಶಿ ಟಿ.ಪಿ. ಜ್ಞಾನಮೂರ್ತಿ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ನಿರ್ದೇಶಕರಾದ ಜಿ ಟಿ ನಂದೀಶ್ ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾದ ಜೆ ಎಂ ಶಿವಾನಂದ, ಕೋಶಾಧ್ಯಕ್ಷರಾದ ಮಲ್ಲಾಪುರದ ರಾಗಿ ಬಸಣ್ಣ ಹಾಗೂ ಸಮಾಜದ ಅನೇಕ ಮುಖಂಡರು ಸಭೆಯಲ್ಲಿ ಹಾಜರಿದ್ದರು.