
ಭಾರತ-ಶ್ರೀಲಂಕಾ (India vs Sri Lanka) ನಡುವಣ 3 ಪಂದ್ಯಗಳ ಟಿ20 ಸರಣಿ ಇಂದಿನಿಂದ (ಜ.3) ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದೀಗ ಮುಂಬೈ ಸುತ್ತಮುತ್ತ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಹೀಗಾಗಿ ಭಾರತ-ಲಂಕಾ ನಡುವಣ ಪಂದ್ಯಕ್ಕೆ ವರುಣ ಅವಕೃಪೆ ತೋರಲಿದ್ಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಆದರೆ ಹವಾಮಾನ ವರದಿ ಪ್ರಕಾರ ಮೋಡ ಕವಿದ ವಾತಾರಣವಿದ್ದರೂ ಪಂದ್ಯವು ಸುಸೂತ್ರವಾಗಿ ನಡೆಯಲಿದೆ.
ಅಕ್ಯುವೆದರ್ ವರದಿ ಪ್ರಕಾರ, ಮುಂಬೈನ ಸುತ್ತಮುತ್ತಲಿನ ಕೆಲ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದರೂ, ವಾಂಖೆಡೆ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಅದರಲ್ಲೂ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ತುಂಬಾ ಕಡಿಮೆ. ಇದಾಗ್ಯೂ ಪಂದ್ಯದ ವೇಳೆ ಶೇ.50 ರಷ್ಟು ಮೋಡ ಕವಿದ ವಾತಾವರಣ ಇರಲಿದೆ ಎಂದು ತಿಳಿಸಿದೆ. ಹೀಗಾಗಿ ನಿಗದಿಯಂತೆ ಮೊದಲ ಟಿ20 ಪಂದ್ಯ ನಡೆಯುವುದು ಖಚಿತ ಎನ್ನಬಹುದು.
ಇನ್ನು ಪಂದ್ಯದ ಸಮಯದಲ್ಲಿ ತೇವಾಂಶದಿಂದ ಕೂಡಿರುವ ವಾತಾವರಣ ಕಂಡು ಬರಲಿದ್ದು, ಆರ್ದ್ರತೆಯು ಸುಮಾರು 61% ರಿಂದ 63% ವರೆಗೆ ಏರಿಳಿತಗೊಳ್ಳುವ ನಿರೀಕ್ಷೆಯಿದೆ. ಹಾಗೆಯೇ ಪಂದ್ಯ ಪ್ರಾರಂಭದಲ್ಲಿ ತಾಪಮಾನವು ಸುಮಾರು 26 ಡಿಗ್ರಿಗಳಷ್ಟು ಇರಲಿದ್ದು, ಮುಕ್ತಾಯದ ವೇಳೆಗೆ 25 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆಯಿದೆ.
ಟಾಸ್ ಪಾತ್ರ ನಿರ್ಣಾಯಕ:
ಈ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ. ಟಾಸ್ ಗೆದ್ದ ತಂಡವು ಹವಾಮಾನವನ್ನು ಪರಿಗಣಿಸಿ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.
ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ:-
- ಜನವರಿ 3: ಮೊದಲ ಟಿ20 ಪಂದ್ಯ (ಸ್ಥಳ-ವಾಂಖೆಡೆ ಸ್ಟೇಡಿಯಂ)
- ಜನವರಿ 5: ಎರಡನೇ ಟಿ20 ಪಂದ್ಯ (ಸ್ಥಳ- ಪುಣೆ ಕ್ರಿಕೆಟ್ ಸ್ಟೇಡಿಯಂ)
- ಜನವರಿ 7: ಮೂರನೇ ಟಿ20 ಪಂದ್ಯ (ಸ್ಥಳ- ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ- ರಾಜ್ಕೋಟ್)
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.