ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗಕ್ಕೆ ಹೊಸ ನಾಯಕತ್ವ: 2026-27ರ ಅಧ್ಯಕ್ಷರಾಗಿ ಶಶಿಧರ್ ರಾವ್.

ಚಿತ್ರದುರ್ಗ, ಜುಲೈ.26 :

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರೋಟರಿ ಕ್ಲಬ್‌ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಯುವ ಉತ್ಸಾಹಿಗಳಾದ ಶಶಿಧರ್‌ ರಾವ್, ಮಂಜುನಾಥ್ ಭಾಗ್ವತ್‌ ಹಿರಿಯರನ್ನು ಸ್ಮರಿಸಿ ಅಧಿಕಾರ ಸ್ವೀಕರಿಸಿದ್ದು ಹೊಸತನಕ್ಕೆ ಮುನ್ನುಡಿ ಬರೆಯಿತು.

2026-27 ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ತಜ್ಞ ರೋ.ಶಶಿಧರ್‌ ರಾವ್‌ ಮಾತನಾಡಿ, ಎಲ್ಲಾ ರೀತಿಯ ಶ್ರಮದಾನದಿಂದ ತನ್ನ ಪದವಿಗೆ ನ್ಯಾಯ ಒದಗಿಸಲು ತಂಡದ ಸಹಕಾರದೊಂದಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಅನೇಕ ಹಿರಿಯರು ಮಹತ್ವಾಕಾಂಕ್ಷೆಯಿಂದ ಕಟ್ಟಿದ ಚಿನ್ಮೂಲಾದ್ರಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತನೆ. ಯುವ ಸಮುದಾಯವನ್ನು ಸಮಾಜಮುಖಿ ಕಾರ್ಯಕ್ಕೆ ತೊಡಗಿಸಲು ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.

ರೋಟರಿ ಸಂಸ್ಥೆ ಸಾಧನೆ , ಸ್ಪಂದನೆ, ಕೊಡುಗೆ,ಆರೋಗ್ಯ, ಅನುಕಂಪ ಹಾಗೂ ಸಾಕ್ಷರತೆಗೆ ಒತ್ತು ನೀಡಿ ಸೇವೆ ಸಲ್ಲಿಸುತ್ತಾ ಬಂದಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಜಾತಿ ಧರ್ಮ, ವರ್ಣಬೇಧಗಳನ್ನು ಮೀರಿದ ಸೇವೆ ಮಾಡಿರುವ ಕೀರ್ತಿ ಸಲ್ಲುತ್ತದೆ. ಸಂಸ್ಥೆಯು ಸೇವಾ ಮನೋಭಾವನೆಯ ವಿಶ್ವ ನಾಯಕರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ. ಆಡಿದ್ದನ್ನು ನಂಬದೇ ಇರಬಹುದು, ಆದರೆ ಮಾಡಿದ್ದನ್ನು ಜನ ನಂಬುತ್ತಾರೆ ಎಂಬ ವಾಕ್ಯದಂತೆ ನಡೆಯೋಣ ಎಂದು ತಿಳಿಸಿದರು.

ನಿಸ್ವಾರ್ಥ ಸೇವೆಯ ಸಂಕಲ್ಪದೊಂದಿಗೆ, ನಾಯಕತ್ವ ಗುಣಗಳು ನಾವು ಪಡೆದುಕೊಳ್ಳುವುದಕ್ಕಿಂತ ಸಮಾಜಕ್ಕೆ ನೀಡುವುದೇ ಮಾನದಂಡ. ಈ ವರ್ಷದ ರೋಟರಿ ಸಂಸ್ಥೆಯ ಜಾಗತಿಕ ಆಶಯದ ವಿಷಯ creating lasting impact ಅಂದರೆ ಶಾಶ್ವತ ಪ್ರಭಾವ ಸೃಷ್ಠಿಸುವುದು. ಇದರ ಜತೆಗೆ ಯುವಜನರಲ್ಲಿ ಕೌಶಲ ವೃದ್ಧಿಗೆ ಬೇಕಾದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.

ಒಬ್ಬರಿಂದ ಸೀಮಿತ ಸಾಧನೆ ಸಾಧ್ಯ, ಆದರೆ ಎಲ್ಲರೂ ಕೈ ಜೋಡಿಸಿ ಮಾಡಿದಾಗ ಹೆಚ್ಚಿನದನ್ನು ಸಾಧಿಸಲು ಸಾಧ್ಯ. ಸಮಾಜದ ಒಳಿತಿನ ಸೇವೆಗಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ. ಎಲ್ಲರೂ ಒಂದಾಗಿ ಸಮಾಜಮುಖಿ ಕಾರ್ಯ ಮಾಡೋಣ ಎಂದು ತಿಳಿಸಿದರು. ನಿಕಟಪೂರ್ವ ಡಿಸ್ಟ್ರಿಕ್ಟ್‌ ಗವರ್ನರ್ ರೋ.ಎಂ.ಕೆ.ರವೀಂದ್ರ ಮಾತನಾಡಿ, ರೋಟರಿ ಕ್ಲಬ್‌ಗೆ ತನ್ನದೇ ಆದ ಇತಿಹಾಸವಿದೆ. ಕೇವಲ ನಾಲ್ವರು ಸ್ನೇಹಿತರಿಂದ ಪ್ರಾರಂಭವಾದ ಸೇವಾ ಸಂಸ್ಥೆ ಇಂದು ಲಕ್ಷಾಂತರ ಜನ ಸದಸ್ಯರನ್ನು ಹೊಂದಿದೆ. ಪ್ರಪಂಚವನ್ನು ಪೊಲೀಯೋ ಮುಕ್ತಗೊಳಿಸಲು ಮಾಡಿದ ಕಾರ್ಯ ಅನುಪಮವಾಗಿದೆ ಎಂದರು.

ರೋಟರಿ ಸೇವಾ ಮನೋಭವನೆಯ ಸಂಘಟನೆಯಾಗಿದ್ದು, ಸಾರ್ವಜನಿಕರಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನಸೇವೆ ಮಾಡುತ್ತಿದೆ. ಜನರಿಗೆ ಅಗತ್ಯವಾದ ಆರೋಗ್ಯ ತಪಾಸಣಾ ಶಿಬಿರ, ಶಿಕ್ಷಣದ ಬಗ್ಗೆ ಮಾಹಿತಿ, ರಕ್ತದಾನ ಶಿಬಿರ, ಸೇರಿದಂತೆ ಕ್ಲಬ್‍ನಿಂದ ದೊರೆಯಬಹುದಾದ ಇತರೆ ಮಾಹಿತಿಯನ್ನು ನಿರಂತರವಾಗಿ ನೀಡುವ ಕಾರ್ಯವಾಗುತ್ತಿದೆ ಎಂದು ತಿಳಿಸಿದರು. ಆರೋಗ್ಯ, ಶಿಕ್ಷಣ, ಸಮಾಜಿಕ ಕಳಕಳಿಯ ಬಗ್ಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಈ ಕಾರ್ಯವನ್ನು ಚಿನ್ಮೂಲಾದ್ರಿ ತಂಡ ಸಹ ಮಾಡಬೇಕಿದೆ ಎಂದರು.

ಇದೇ ವೇಳೆ ಹಿರಿಯ ಪತ್ರಕರ್ತ ಕೆ.ಪಿ.ಓಂಕಾರಮೂರ್ತಿ ಹಾಗೂ ಹಿರಿಯ ವೈದ್ಯ ಡಾ.ವಿ.ಹರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿಗಳಾಗಿ ನವೀಕರಿಸಬಹುದಾದ ಇಂಧನ ಬಳಕೆ ಅನುಷ್ಠಾನ ತಜ್ಞ ರೋ.ಮಂಜುನಾಥ್‌ ಭಾಗ್ವತ್‌ ಹಾಗೂ ಖಜಾಂಚಿಗಳಾಗಿ ರೋ.ಪಿ.ಬಿ.ಶಿವರಾಮ್ ಅಧಿಕಾರ ಸ್ವೀಕರಿಸಿದರು. ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್‌ ರೋ.ಕೆ.ಮಧುಪ್ರಸಾದ್‌, ಅಸಿಸ್ಟೆಂಟ್‌ ಗವರ್ನರ್ ರೋ.ಸವಿತಾ ಶಿವಕುಮಾರ್, ಜಸ್ಟಿಸ್ ಶ್ರೀ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಡೆಪ್ಯೂಟಿ ಕನ್ಸರ್ವೇಟರ್‌ ಆಫ್ ಫಾರೆಸ್ಟ್ ಗೋಪ್ಯಾ ನಾಯಕ್‌, ಕ್ಲಬ್ ನ ಪಾಸ್ಟ್ ಪ್ರೆಸಿಡೆಂಟ್ ರೋ.ದಿಲ್ಷದ್‌ ಉನ್ನೀಸಾ, ಪಾಸ್ಟ್ ಸೆಕ್ರೆಟರಿ ರೋ.ಅಮೃತಾ ಸಂತೋಷ್‌, ನಿವೃತ್ತ ಪ್ರಾಂಶುಪಾಲ ರೋ. ಉಮೇಶ್‌ ವೀರಣ್ಣ ತುಪ್ಪದ, ಪಾಸ್ಟ್‌ ಅಸಿಸ್ಟೆಂಟ್‌ ಗವರ್ನರ್‌ ರೋ.ಗಾಯತ್ರಿ ಶಿವರಾಮ್‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *