ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಮಾ. 18
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪರವರು ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ “ಪಿಯು ಆಡಳಿತ ನಿಯಂತ್ರಣವನ್ನು ಜಿ.ಪಂ ಸಿಇಒ ಗಳಿಗೆ ವಹಿಸುವ ಪ್ರಸ್ತಾವನೆಯನ್ನು ಸದ್ಯಕ್ಕೆ ನಮ್ಮ ಸರ್ಕಾರ ಕೈಬಿಟ್ಟಿದೆ.ಈ ಬಗ್ಗೆ ಉಪನ್ಯಾಸಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂಬ ಭರವಸೆಯನ್ನು ನೀಡಿದ ಹಿನ್ನಲೆಯಲ್ಲಿ ಇದನ್ನು ಸ್ವಾಗತಿಸಿದ ಜಿಲ್ಲಾ ಸಂಘ ಉಪನ್ಯಾಸಕರುಗಳು ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಸಕಾಲದಲ್ಲಿ ಮೌಲ್ಯಮಾಪನ ಮುಗಿಸಿ ಏಪ್ರಿಲ್ 7 ನೇ ತಾರೀಖು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಗೆ ಅನುವು ಮಾಡಿಕೊಡುವಂತೆ ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿ ಇತರೇ ರಾಜ್ಯಗಳಿಗೆ ಮಾದರಿಯಾಗಿದೆ.ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಅಧಿಕಾರವನ್ನು ಏಕಾಏಕಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಪ್ರಸ್ತಾಪಿತ ಕಡದ ಸಂಖ್ಯೆ ಇಪಿ 10 ಡಿಜಿಡಿ 2026 ಸಿದ್ಧಪಡಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಲಾಗಿತ್ತು.
ಈ ವಿಚಾರವಾಗಿ ಉಭಯ ಸಂಘಟನೆಗಳು ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ಸೇರಿ ಸರ್ಕಾರದ ಪ್ರಸ್ತಾಪವನ್ನು ಹಿಂಪಡೆಯುವುದು ಸೇರಿದಂತೆ ಇತರೆ ಐದು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ 2026 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಹೋರಾಟದ ಒಂದನೇ ಹಂತವಾಗಿ ಮಾ 12 ರ ಗುರುವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಮುಖಾಂತರ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಉಭಯ ಸಂಘಟನೆಗಳಿಂದ ಮನವಿ ಸಲ್ಲಿಸಲಾಗಿತ್ತು.
ವಿಧಾನ ಪರಿಷತ್ ಸದಸ್ಯರುಗಳಾದ ಪುಟ್ಟಣ್ಣ, ಎಸ್ ಎಲ್ ಭೋಜೇಗೌಡ, ಎಸ್ ವಿ ಸಂಕನೂರು ,ಹನುಮಂತಪ್ಪ ನಿರಾಣಿ,ಕೆ.ವಿವೇಕಾನಂದ, ರಾಮೋಜಿ ಗೌಡ ಹಾಗೂ ಡಿ.ಟಿ ಶ್ರೀನಿವಾಸ್ ರವರುಗಳ ಸಹಾಯದಿಂದ ವಿಧಾನ ಪರಿಷತ್ತು ಸದನದ ಶೂನ್ಯ ವೇಳೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರುಗಳ ಕಚೇರಿಯ ನಿಯಂತ್ರಣ ಮತ್ತು ಮೇಲ್ವಿಚಾರಣೆ ಅಧಿಕಾರವನ್ನು ಜಿಲ್ಲಾ ಪಂಚಾಯತ್ ಸಿಇಒ ರವರಿಗೆ ವರ್ಗಾಯಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇರುವುದಿಲ್ಲ ಎಂಬ ಉತ್ತರವನ್ನು ಶಿಕ್ಷಣ ಸಚಿವರು ನೀಡಿರುತ್ತಾರೆ ಹಾಗೂ ಉಪನ್ಯಾಸಕರ ಸಂಘದ ಎಲ್ಲಾ ಐದು ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ವಿಶೇಷವಾಗಿ ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು 180:1 ಇಳಿಸುವ ವಿಚಾರವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಿಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಕಾರ್ಯಭಾರ ಸರಿದೂಗಿಸಲು ಸರ್ಕಾರಿ ಕಾಲೇಜಿಗೆ ನಿಯೋಜಿಸುವ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಿದ್ದಾರೆ.
ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈ ತಿಂಗಳ 24ನೇ ತಾರೀಖಿನ ನಂತರ ಸಭೆ ಕರೆಯವುದಾಗಿ ತಿಳಿಸಿರುತ್ತಾರೆ.
ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ಸಂಘಟನೆಗಳ ಜಿಲ್ಲಾಧ್ಯಕ್ಷರುಗಳ ಜೊತೆ ಮಾ.18ರಂದು ಕರೆದ ಗೂಗಲ್ ಮೀಟ್ನಲ್ಲಿ ಎಲ್ಲಾ ಜಿಲ್ಲಾವಾರು ಬಹುಮತದ ಅಭಿಪ್ರಾಯಗಳನ್ನು ಸಂಗ್ರಹಿಸಿ “ತಾತ್ಕಾಲಿಕವಾಗಿ ಮೌಲ್ಯಮಾಪನ ಬಹಿಷ್ಕಾರದ ನಿರ್ಧಾರವನ್ನು ಹಿಂಪಡೆಯಲಾಗಿದೆ.” ಆದ್ದರಿಂದ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ನಿಗಧಿತ ದಿನಾಂಕಗಳಲ್ಲಿ ತಮ್ಮ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಸಕಾಲದಲ್ಲಿ ಮೌಲ್ಯಮಾಪನ ಮುಗಿಸಿ ಏಪ್ರಿಲ್ 7 ನೇ ತಾರೀಖು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಗೆ ಅನುವು ಮಾಡಿಕೊಡುವಂತೆ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಕೋರಿದ್ದಾರೆ.
