ಉದ್ಯೋಗಕ್ಕಾಗಿ ವಿದ್ಯಾರ್ಥಿಗಳ ಆಂದೋಲನ ಅಗತ್ಯ: ಚಿತ್ರದುರ್ಗ ಪ್ರತಿಭಾ ಪುರಸ್ಕಾರದಲ್ಲಿ ಹೆಚ್. ಮಂಜಪ್ಪ ಅಭಿಪ್ರಾಯ.

ಚಿತ್ರದುರ್ಗ, ಜೂ.28:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಜ್ಯದಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರ ಫಲ 56 ಸಾವಿರ ಹುದ್ದೆಗಳ ನೇಮಕಾತಿಗೆ ಪ್ರತಿಕ್ರಿಯೆ ಆರಂಭವಾಗಿದ್ದು, ಯುವಪೀಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ಸಿದ್ಧತೆ ನಡೆಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಹೇಳಿದರು.

ಮಾದಿಗ ಯುವಸೇನೆ, ದಸಂಸ ವತಿಯಿಂದ ನಗರದ ವೀರಸೌಧ ಆವರಣದಲ್ಲಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು. ರಾಜ್ಯದಲ್ಲಿ ಉದ್ಯೋಗ ನೇಮಕಾತಿ ಆಗುತ್ತಿರುವುದು ವಿದ್ಯಾರ್ಥಿಗಳ ಹೋರಾಟದ ಫಲ. ಅದೇ ರೀತಿ ಉದ್ಯೋಗ ನೇಮಕಾತಿಗೆ ಮುಂದಾಗುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗುವುದೆಂಬ ಮಾತು ನರೇಂದ್ರ ಮೋದಿ ಮರೆತಿದ್ದಾರೆ. ಅದನ್ನು ನೆನಪಿಸಿ ಕಾರ್ಯರೂಪಕ್ಕೆ ತರಲು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿ ಸಮೂಹ ಬೀದಿಗಿಳಿದರೆ ಕೋಟ್ಯಂತರ ಸಂಖ್ಯೆಯಲ್ಲಿ ಉದ್ಯೋಗವಕಾಶಗಳು ಬಾಗಿಲು ತೆರೆದುಕೊಳ್ಳಲಿವೆ ಪಾಲಕರು ಅತ್ಯಂತ ಸಂಕಷ್ಟದಲ್ಲೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶ್ರಮಿಸುತ್ತಾರೆ. ಅವರ ಆಶಯ, ಕನಸುಗಳನ್ನು ಅರಿತು ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಆಸಕ್ತಿ ತೋರಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.

ದಲಿತ ಮುಖಂಡ ಹನುಮಂತಪ್ಪ ದುರ್ಗ ಮಾತನಾಡಿ, ಅಂಬೇಡ್ಕರ್ ಸೇರಿ ಅನೇಕ ಮಹನೀಯರ ಆಶಯ ಸಮ ಸಮಾಜ. ಆದರೆ, ಇಲ್ಲಿಯವರೆಗೂ ಅಸ್ಪøಶ್ಯತೆ ದೂರವಾಗಿಲ್ಲ. ಇದಕ್ಕೆ ತಕ್ಕ ಉತ್ತರ ಶಿಕ್ಷಣವೊಂದೇ ಏಕೈಕ ಮಾರ್ಗ ಪ್ರೊ.ಬಿ.ಕೃಷ್ಣಪ್ಪ ರಾಜ್ಯದಲ್ಲಿ ದಲಿತ ಸಮುದಾಯದಲ್ಲಿ ಜಾಗೃತಿ ಬೀಜ ಬಿತ್ತಿದ ಹೋರಾಟಗಾರ. ರಾಜ್ಯದ ಎಲ್ಲಿಯೇ ದೌರ್ಜನ್ಯ, ಅತ್ಯಾಚಾರ, ಕೊಲೆಯಂತ ದುರ್ಘಟನೆಗಳು ಸಂಭವಿಸಿದರೆ ಅದರ ವಿರುದ್ಧ ದಸಂಸ ಮೂಲಕ ಹೋರಾಟಕ್ಕೆ ಇಳಿಯುತ್ತಿದ್ದರು. ಆ ಚಳವಳಿ ಮನಸ್ಸುಗಳು ಈಚೆಗೆ ಕಾಣುತ್ತಿಲ್ಲ ಎಂದು ಬೇಸರಿಸಿದರು.

ವಿದ್ಯಾರ್ಥಿಗಳಲ್ಲಿ ಹೋರಾಟದ ಮನೋಭಾವ ಇರಬೇಕು. ತನ್ನ ಹಾಗೂ ಸಮಾಜದ ವಿರುದ್ಧ ನಡೆಯುವ ದಬ್ಬಾಳಿಕೆ ವಿರುದ್ಧ ಬೀದಿಗಿಳಿಯಬೇಕು. ಮುಖ್ಯವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ತಪ್ಪು-ಸರಿಯ ಅರಿವು ಬರಲಿದ್ದು, ಪ್ರಶ್ನೀಸುವ ಧೈರ್ಯ ಮೂಡಲಿದೆ ನೀಟ್ ಪರೀಕ್ಷೆ ಪ್ರಶ್ನೇ ಪತ್ರಿಕೆ ಅವಾಂತರದಿಂದ ದೇಶದಲ್ಲಿ ಅನೇಕ ವಿದ್ಯಾರ್ಥಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ, ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಈ ಕುರಿತು ಮಾತನಾಡುತ್ತಿಲ್ಲ. ಕೇಂದ್ರದ ಶಿಕ್ಷಣ ಸಚಿವರ ರಾಜೀನಾಮೆ ಪಡೆದಿಲ್ಲ ಮೊಬೈಲ್, ಟಿವಿ ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಅವು ನಮ್ಮನ್ನು ನಾಶ ಮಾಡಲಿವೆ ಎಂದು ಎಚ್ಚರಿಸಿದರು.

ಸಾಹಿತಿ ಹೆಚ್.ಆನಂದಕುಮಾರ್ ಮಾತನಾಡಿ, ದೇಶಕ್ಕೆ ಸಂಪತ್ತು ಆಗದಿದ್ದರೂ ಮಾರಕ ಆಗದ ರೀತಿ ಬದುಕು ರೂಪಿಸಿಕೊಳ್ಳಬೇಕು. ಮುಖ್ಯವಾಗಿ ನಿರಂತರ ಓದು ಮಾತ್ರ ಉತ್ತಮ ಸ್ಥಾನಮಾನ ತಂದುಕೊಡಲಿದೆ ಎಂದರು. ಮುಸ್ಲಿಂ ಧರ್ಮದಲ್ಲಿ ಸಮಾನತೆ ಇದೆ. ಆದರೆ, ಹಿಂದುಗಳಲ್ಲಿ ಇಲ್ಲ. ಅನೇಕ ಅನಿಷ್ಠ ಪದ್ಧತಿಗಳು ಈಗಲೂ ಜೀವಂತವಾಗಿವೆ. ಅವುಗಳ ನಿರ್ಮೂಲನೆಗೆ ನಾವೆಲ್ಲರೂ ಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾದಿಗ ಯುವಸೇನೆ ಅಧ್ಯಕ್ಷ ಬಿ.ರಾಜಪ್ಪ ಮಾತನಾಡಿ, ದಿನಕ್ಕೆ ಕನಿಷ್ಠ 6 ಗಂಟೆಗಳ ಕಾಲ ಓದುವ ಹವ್ಯಾಸ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಪದವಿ ಹಂತದಲ್ಲಿಯೇ ಸಿದ್ಧತೆ ನಡೆಸಬೇಕು ಯಾರೂ ವಿದ್ಯಾರ್ಥಿ ಜೀವನದಲ್ಲಿ ಇಷ್ಟಪಟ್ಟು ಓದುತ್ತಾರೆ. ಅವರ ಬದುಕು ಉತ್ತಮವಾಗಿರುತ್ತದೆ. ಉನ್ನತ ಸ್ಥಾನಮಾನಗಳು, ಹುದ್ದೆಗಳು ದೊರೆಯುತ್ತವೆ. ಈ ಮೂಲಕ ಅವರ ಇಡೀ ಕುಟುಂಬ ಮುಖ್ಯವಾಹಿನಿಗೆ ಬರುತ್ತದೆ ಎಂದು ತಿಳಿಸಿದರು.

ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಲಂ ಜನರ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಮಹೇಶ, ಮುಖಂಡರಾದ ಟಿ.ಮಂಜಣ್ಣ ತಿಮ್ಮಪ್ಪಯ್ಯನಹಳ್ಳಿ, ತಾಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕೆ.ರುದ್ರಮುನಿ, ಗೋನೂರು ಮಲ್ಲಿಕಾರ್ಜುನ್, ಪುರುಷೋತ್ತಮ, ಟಿ.ಆರ್.ತಿಪ್ಪೇಸ್ವಾಮಿ, ಮಂಜುನಾಥ್, ವಕೀಲ ಎನ್.ಹರೀಶ್, ಹೊನ್ನೂರಪ್ಪ ಇತರರಿದ್ದರು.

ಎಬಿವಿಪಿ ಬಿಜೆಪಿ ಮುಖವಾಣಿ ನಾಡಿನ ಎಲ್ಲೆಡೆ ಸಣ್ಣ ಲೋಪ ಸಂಭವಿಸಿದರೂ ಬೀದಿಗಿಳಿಯುವ ಎಬಿವಿಪಿ ನೀಟ್ ಪರೀಕ್ಷೆಯಲ್ಲಿ ದೊಡ್ಡ ಹಗರಣ ನಡೆದಿದ್ದರೂ ಮೌನವಾಗಿದೆ. ಇದರರ್ಥ ಎಬಿವಿಪಿ ಬಿಜೆಪಿ ಮುಖವಾಣಿ ಎಂಬುದು ಸ್ಪಷ್ಟ ಎಂದು ಹನುಮಂತಪ್ಪ ದುರ್ಗ ಆರೋಪಿಸಿದರು. ಆದ್ದರಿಂದ ನಾವೆಲ್ಲರೂ ಬಿಜೆಪಿಯ ಮುಖವಾಡ ಆಗಿರುವ ಆರೆಸ್ಸೆಸ್, ಭಜರಂಗದಳ, ಎಬಿವಿಪಿ ಸೇರಿ ವಿವಿಧ ಸಂಘಟನೆಗಳ ಕುರಿತು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *