ಚಿತ್ರದುರ್ಗ ಕವಿಮಂ ನೌಕರರ ಪತ್ತಿನ ಸಹಕಾರ ಸಂಘದ 66ನೇ ವಾರ್ಷಿಕ ಮಹಾಸಭೆ: ರೂ. 1.55 ಕೋಟಿ ಲಾಭ.

​ಚಿತ್ರದುರ್ಗ: ನಗರದ ಕವಿಪ್ರನಿ ನೌಕರರ ಸಮುದಾಯ ಭವನದಲ್ಲಿ ಚಿತ್ರದುರ್ಗ ಮತ್ತು ಹಿರಿಯೂರು ವಿಭಾಗೀಯ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತದ 66ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕೆ.ಪಿ. ಬಸವರಾಜ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.

​ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿದ ಸಂಘದ ಕಾರ್ಯದರ್ಶಿ ಕೆ. ವೀರೇಶ್ ಅವರು, ಪ್ರಸ್ತುತ ಸಹಕಾರ ಸಂಘವು 1,236 ಸದಸ್ಯರನ್ನು ಹೊಂದಿದ್ದು, ರೂ. 8.58 ಕೋಟಿ ಷೇರು ಬಂಡವಾಳ ಹೊಂದಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಸಂಘವು ರೂ. 1.55 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡ 13 ರಷ್ಟು  ಡಿವಿಡೆಂಡ್ ವಿತರಿಸಲು ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಪಡೆಯಲಾಯಿತು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಸ್ಕಾಂ ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಲಿಂಗರಾಜು ಅವರು, ಸಂಘವು ತನ್ನ ಸದಸ್ಯರಿಗೆ ವಿವಿಧ ರೀತಿಯಲ್ಲಿ ರೂ. 11 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುತ್ತಾ ಉತ್ತಮ ಆರ್ಥಿಕ ನೆರವು ನೀಡುತ್ತಿದ್ದು, ಸಂಸ್ಥೆಯು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಮತ್ತೊಬ್ಬ ಅತಿಥಿ ತಿಪ್ಪೇಶ್ ಅವರು ಮಾತನಾಡಿ, ಸಂಘವು ಬರೋಬ್ಬರಿ ರೂ. 57 ಕೋಟಿ ವಹಿವಾಟು ನಡೆಸುವ ಹಂತಕ್ಕೆ ತಲುಪಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು.

​ಅಧ್ಯಕ್ಷತೆ ವಹಿಸಿದ್ದ ಕೆ.ಪಿ. ಬಸವರಾಜ್ ಅವರು ಮಾತನಾಡಿ, ಸಂಘ ನೀಡುತ್ತಿರುವ ಸಾಲದ ಮೊತ್ತ ಸಾಲದೆ ಸದಸ್ಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದುಬಾರಿ ಬಡ್ಡಿದರಕ್ಕೆ ಸಾಲ ಪಡೆಯುವಂತಾಗಿದೆ. ಇದನ್ನು ತಪ್ಪಿಸಲು ಸಂಘದ ವತಿಯಿಂದಲೇ ಹೆಚ್ಚಿನ ಮೊತ್ತದ ಸಾಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗುತ್ತಿದ್ದು, ಸಂಸ್ಥೆಯ ಬೆಳವಣಿಗೆಗೆ ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸದಸ್ಯರ ಮರಣ ಪರಿಹಾರ ನಿಧಿಯನ್ನು ರೂ. 25,000 ದಿಂದ ರೂ. 30,000 ಕ್ಕೆ ಹೆಚ್ಚಿಸಲು ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು.

​ಸಮಾರಂಭದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

​ಶ್ರೀಮತಿ ರೋಹಿಣಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯನ್ನು ನಿರ್ದೇಶಕ ಗೋವರ್ಧನ್ ಸ್ವಾಗತಿಸಿದರು. ನಿರ್ದೇಶಕ ಪರಮೇಶ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ದೇವರಾಜ್, ನಿರ್ದೇಶಕರುಗಳಾದ ಮಮತಾ, ಕೋಮಲ, ರವಿಕುಮಾರ್, ಅಭಿಷೇಕ್, ತಿಪ್ಪೇಸ್ವಾಮಿ, ಮಂಜುನಾಥ್, ಶಾಂತಕುಮಾರ್, ರಾಜಗೋಪಾಲ್, ಮುನಾವರ್ ಮನ್ಸೂರ್ ಖಾನ್, ನರಸಿಂಹಮೂರ್ತಿ ಹಾಗೂ ನೌಕರರ ಸಂಘದ ಪದಾಧಿಕಾರಿಗಳಾದ ರವಿ, ಸುರೇಶ್ ಬಾಬು ಮತ್ತು ಕಲ್ಯಾಣ ಸಂಸ್ಥೆಯ ರಮೇಶ್ ನಾಗರಾಜ್ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *