ಯೋಗ ಸಂಸ್ಥೆಯಿಂದ ಗುರುವಂದನೆ: ಗುರುವಿನ ಮಹತ್ವದ ಕುರಿತು ಡಾ. ತಾರಿಣಿ ಶುಭದಾಯಿನಿ ಉಪನ್ಯಾಸ.
ಚಿತ್ರದುರ್ಗ, ಜು, 29,
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಮಗೆ ಗುರು ಸ್ವರೂಪದಲ್ಲಿ ಬಂದು ಒಂದು ಸಣ್ಣ ತಿಳುವಳಿಕೆಯನ್ನ ಮೂಡಿಸಿದರೂ ಸಾಕು ಅವರು ನಮ್ಮ ಪಾಲಿಗೆ ಗುರುವಾಗುತ್ತಾರೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್. ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.
ನಗರದ ನೀಲಕಂಠೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆ (ರಿ) .ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಇವರುಗಳ ಸಹಯೋಗದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವ ಸಾರುವ ಬಗ್ಗೆ ಮಾತನಾಡುತ್ತಾ ಗುರುವಿನ ಮಹತ್ವವನ್ನು ನಾವೆಲ್ಲರೂ ಬೇರೆ ಬೇರೆ ರೂಪದಲ್ಲಿ ಕೇಳಿ ಮತ್ತೆ ಕೆಲ ಅನುಭವಗಳಿಂದ ಬಲ್ಲೆವು. ಇಂತಹ ಅನುಭವಗಳು ಕೆಲವು ಸಣ್ಣದಾಗಿರಬಹುದು, ಇಲ್ಲವೇ ದೊಡ್ಡದಾಗಿರಬಹುದು. ಗುರು ಅಂದರೆ ಕತ್ತಲೆಯನ್ನು ಹೋಗಲಾಡಿಸುವುದು ಎಂದರ್ಥ. ಅಂತಹ ಅಂಧಕಾರವನ್ನು ಹೋಗಲಾಡಿ ಸುವಂತಹ ಯಾರಾದರೂ ಆಗಿರಬಹುದು, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ದೊಡ್ಡ ಪರಂಪರೆಯೇ ಇದೆ.
ಅರಿವನ್ನ ಪ್ರೇರೇಪಿಸುವವನೇ ಗುರು .ನಮ್ಮಲ್ಲಿರುವ ಸೂಪ್ತ ಚೇತನವನ್ನು ಎಬ್ಬಿಸಿ ಜೊತೆಗೆ ಜಾಗೃತಿ ಉಂಟು ಮಾಡುತ್ತಾನೆ . ಈ ಜಾಗೃತಿಯನ್ನುಂಟು ಮಾಡುವ ಹಿನ್ನೆಲೆಯಲ್ಲಿ ನಮಗೆ ಮೊದಲು ಸಿಗುವುದು ನಮ್ಮ ತಾಯಿ ತಂದೆಯರು. ಅವರು ಹಾಕಿಕೊಟ್ಟ ಮತ್ತು ಹೇಳಿದ ಕ್ರಮದಿಂದ ನಾವು ಜಗತ್ತನ್ನ ನೋಡಲಿಕ್ಕೆ ಪ್ರಾರಂಭಿಸುತ್ತೇವೆ. ಇದನ್ನು ಹೊರತುಪಡಿಸಿ ಶಾಲಾ-ಕಾಲೇಜುಗಳ ಸಂಗದಿಂದ ಅಕ್ಷರಗಳ ಮೂಲಕ ಜ್ಞಾನದ ನಿರಾಕರ ಸ್ವರೂಪವನ್ನು ಪಡೆಯಲಿಕ್ಕೆ ಒಂದು ಚಿಮ್ಮು ಹಲಗೆಯಾಗಿ ಇರುತ್ತಾರೆ. ನಂತರ ಸಂಸಾರದಲ್ಲಿರುವ ಎಲ್ಲರಿಗೂ ಬೇಯುವ ತಹ-ತಹ, ಕಳವಳ ಬೇಗೂದಿ ಇರುತ್ತದೆ ಎಂದರು.
ಒಳ ಒಳಗೆ ಹೋಗುವ ಪ್ರಯಾಣ. ಇದನ್ನ ಹೊರಗೆ ಹುಡುಕದೆ ಅಂತರಂಗದ ಮೂಲಕ ಯಾನ ಆರಂಭಿಸಬೇಕಾಗಿದೆ. ಅದು ಜೀವನದಲ್ಲಿ ಬರುವ ದೊಡ್ಡ ತಿರುವು.ಅದು ಬರುವುದು ಒಬ್ಬ ಗುರುವಿನ ದರ್ಶನದಿಂದ. ಅದು ಯಾವ ರೂಪದಲ್ಲಾದರೂ ಬರಬಹುದು. ಗುರುವೆಂದರೆ ಫೋಕಸ್ ಲೈಟ್ .ನಮ್ಮ ಅಸ್ತಿತ್ವದ ಬಗ್ಗೆ ಕೇಳಿಕೊಳ್ಳುವಾಗ ಟಾರ್ಚ್ ಲೈಟ್ ಆಗಿ ಬರುವನೇ ಗುರು. ಇಂತಹ ಗುರುವಿನ ಆಗಮನದಿಂದ ಶಿಷ್ಯ ತನ್ನ ಬದುಕನ್ನ ಸಾರ್ಥಕ ಪಡಿಸಿಕೊಳ್ಳುತ್ತಾನೆ. ಅಲ್ಲಮರಿಂದ ಜ್ಞಾನ ಪಡೆಯುವ ಮಾರ್ಗ ,ಹಾಗೆ ಬಸವಣ್ಣ ಮತ್ತು ಅಕ್ಕಮಹಾದೇವಿಯರ ನಡುವಿನ ಅರಿವಿನ ಮಾರ್ಗಗಳು ಗುರು ಎನ್ನುವ ತತ್ವಕ್ಕೆ ಉದಾತ ತತ್ವಗಳ ಮೂಲಕ ಪ್ರೇರಣೆಗಳನ್ನ ಹತ್ತಾರು ಬಗೆಯ ವಿಷಯಗಳನ್ನ ಉದಾಹರಣೆಯ ಮೂಲಕ ವಿವರಿಸಿದರು.
ಸಮಾರಂಭದ ವೇದಿಕೆಯಲ್ಲಿ ಸಂಘಟನೆಗಳ ಪದಾಧಿಕಾರಿಗಳಾದ ರೋ.ಜಗನ್ನಾಥ ಶೆಟ್ಟಿ, ರೋ.ಎಂ.ವಿ. ರವಿ ರೋಶ್ರೀಮತಿಸುನಿತಾ, ರಮೇಶ್ ,ರೋ.ಶ್ರೀಮತಿ ಸುಧಾನಾಗರಾಜ್ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೋಗಾಚಾರ್ಯ ಎಲ್.ಎಸ್ .ಚಿನ್ಮಯಾನಂದ ಅವರು ಗುರುವಿನ ಮಹತ್ವ ಸಾರುವ ಹಾಗೆ ಅನೇಕರು ತಮ್ಮ ಬದುಕನ್ನು ತ್ಯಾಗ ಮಾಡಿ ಜಾಗೃತಿ ಹಾಗೂ ಜ್ಞಾನದ ಬೆಳಕನ್ನ ಚೆಲ್ಲಿದ್ದಾರೆ. ಅಂತಹ ಗುರುವನ್ನು ಸ್ಮರಿಸುವ ದಿನ ಸುದಿನವಾಗಿದ್ದು, ಎಲ್ಲರೂ ಅಂತಹ ಗುರುವಿನ ಪಥ ಅನುಸರಿಸಿ ಎಂದು ಆಶಿಸಿದರು.
ಸಮಾರಂಭದಲ್ಲಿ ವಿವಿಧ ಸಮಾಜಗಳ, ಸಂಘಟನೆಗಳ ಪದಾಧಿಕಾರಿಗಳು ಆಸಕ್ತಿಯಿಂದ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಯೋಗ ತರಬೇತಿ ನೀಡುತ್ತಿರುವ ಯೋಗ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಲಾಯಿತು.
ಸಮಾರಂಭವನ್ನು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಆರಂಭಿಸಲಾಯಿತು. ವಚನ ಹಾಗೂ ಗೀತೆಯೊಂದನ್ನು ಕೋಕಿಲ.ಎಂ .ಜೆ ಪ್ರಸ್ತುತಪಡಿಸಿದರು. ಡಾ.ರಘುನಾಥ್ ರೆಡ್ಡಿ ಸ್ವಾಗತಿಸಿದರು. ಶಿಕ್ಷಕಿ ವಿಮಲಾಕ್ಷಿ ಕಾರ್ಯಕ್ರಮ ನಿರೂಪಿಸಿ, ಶರಣು ಸಮರ್ಪಣೆ ನೆರವೇರಿಸಿದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j