ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿವಾದ:ಹೆಚ್. ವಿಶ್ವನಾಥ್ ಕ್ಷಮೆ ಕೇಳಲಿ; ಎನ್.ಡಿ. ಕುಮಾರ್ ಆಗ್ರಹ.

ಚಿತ್ರದುರ್ಗ ಏ, 29

ವರದಿ ಮತ್ತು ಪೋಟೋ ಕೃಪೆ, ಸುರೇಶ್ ಪಟ್ಟಣ್

ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ದಾಖಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 94.1% ಫಲಿತಾಂಶ ಪಡೆದು ಪಾಸಾದ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿ ಪಾಸಾಗಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಅವಮಾನಿಸಿರುವ ಮಾಜಿ ಶಿಕ್ಷಣ ಸಚಿವ ಹೆಚ್. ವಿಶ್ವನಾಥ್ ಈ ರಾಜ್ಯದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕೆಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎನ್.ಡಿ.ಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಶಾಲೆಗಳಲ್ಲಿ ಸಿಸಿ ಟಿವಿ ಆಫ್ ಮಾಡಿ ಸಾಮೂಹಿಕ ಕಾಪಿ ಮಾಡಿಸಲಾಗಿದೆ ಎಂಬ ಅಸಮಂಜಸ ಹೇಳಿಕೆಯಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆದು ಪಾಸಾದ ವಿದ್ಯಾರ್ಥಿಳಿಗೆ ಮಾನಸಿಕವಾಗಿ ಘಾಸಿಯನ್ನುಂಟು ಮಾಡುವ ಕೆಲಸ ಮಾಡಿದ್ದಾರೆ. ಹೆಚ್. ವಿಶ್ವನಾಥ್ ನಡೆಸಿರುವ ಪತ್ರಿಕಾಗೋಷ್ಠಿಯನ್ನು ನೋಡಿದಾಗ ವಯೋಸಹಜ ಅರಳು-ಮರಳು ಅವರನ್ನು ಕಾಡುತ್ತಿದೆ ಎಂದು ಭಾಸವಾಗುತ್ತದೆ.

ಅವರ ಮಾತಿನಲ್ಲಿ ಒಂದಕ್ಕೊಂದು ತಾಳೆಯಾಗದೇ ಅಸಂಭದ್ದವಾಗಿ ಮಾತನಾಡಿರುವುದು ಕಂಡುಬರುತ್ತದೆ. ಮಧುಬಂಗಾರಪ್ಪನವರ ಶೈಕ್ಷಣಿಕ ಅರ್ಹತೆ ಬಗ್ಗೆ ಮಾತನಾಡಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜ್‍ರವರು ಕೇವಲ ಆರನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು. ಅವರೊಬ್ಬ ದೂರದರ್ಶಿತ್ವದ ನಾಯಕರಾದರು. ಉಚಿತ ಶಿಕ್ಷಣ, ಕಡ್ಡಾಯ ಶಾಲಾ ಶಿಕ್ಷಣ ಮತ್ತು ಕ್ರಾಂತಿಕಾರಿ ಮಧ್ಯಾಹ್ನದ ಊಟ ಯೋಜನೆಯನ್ನು ಪ್ರಾರಂಭಿಸಿದ್ದರು. ಮಾತು ಸಾಧನೆಯಾಗಬಾರದು, ನನ್ನ ಕೆಲಸವೇ ಸಾಧನೆಯಾಗಬೇಕೆಂಬ ರೀತಿಯಲ್ಲಿ ಕೆಲಸ ಮಾಡುತ್ತಿರುವ ಮಧುಬಂಗಾರಪ್ಪನವರು, ಇಂದು ತಂದೆ ಬಂಗಾರಪ್ಪನವರು ಬದುಕಿದ್ದರೆ ಮಧು ಬಂಗಾರಪ್ಪ ನನ್ನ ಮಗ ಎಂದು ಹೆಮ್ಮೆ ಪಡುತ್ತಿದ್ದರು ಎಂದು ಎನ್.ಡಿ. ಕುಮಾರ್ ತಿಳಿಸಿದ್ದಾರೆ.

ಇನ್ನು ಕಿಕ್ ಬ್ಯಾಕ್ ಬಗ್ಗೆ ಮಾತನಾಡಿದ್ದಾರೆ. ಕಿಕ್ ಬ್ಯಾಕ್ ಪಡೆದು ಮುಂಬೈನ ವಿಮಾನ ಹತ್ತಿದ್ದನ್ನು ಕರ್ನಾಟಕದ ಜನತೆ ಇನ್ನೂ ಮರೆತಿಲ್ಲ. ಅವರು ಈ ರೀತಿ ಮಾತನಾಡುವ ನೈತಿಕತೆಯೇ ಅವರು ಕಳೆದುಕೊಂಡಿದ್ದಾರೆ. ಪಕ್ಷದಲ್ಲಿ ನಾನು ಇದ್ದೇನೆ ಎಂದು ತನ್ನ ಅಸ್ತಿತ್ವ ತೋರಿಸುವ ಸಲುವಾಗಿ ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ಇಲ್ಲಿಗೆ ನಿಲ್ಲಿಸಿ ಈ ಇಳಿವಯಸ್ಸಿನಲ್ಲಿ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಒಳಿತೆಂದು ಮಾಜಿ ಸಚಿವರಿಗೆ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *