ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ 2026: ಆಡಗಲ್ ಗ್ರಾಮದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ.

ವರದಿ : ಕುಮಾರ್ ಜಿ.ಎನ್ – 9945712918

ಬಾಗಲಕೋಟೆ, ಜೂನ್ 13:

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ, ರೀಚ್ ಸಂಸ್ಥೆ ಹಾಗೂ ಮಕ್ಕಳ ಗುಂಪಿನ ಸಹಯೋಗದೊಂದಿಗೆ ಆಡಗಲ್ ಗ್ರಾಮದಲ್ಲಿ ಶನಿವಾರ ಜಾಗೃತಿ ಜಾಥಾವನ್ನು ಆಯೋಜಿಸಲಾಯಿತು.

ಜಾಥಾ ಕಾರ್ಯಕ್ರಮಕ್ಕೆ ಮುಖ್ಯಗುರುಗಳಾದ ಬಿ.ಬಿ. ಅಂಗಡಿ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶಾಲಾ ಮಕ್ಕಳು “ಮಕ್ಕಳು ಶಾಲೆಯಲ್ಲಿ ಇರಬೇಕು, ಕೆಲಸದಲ್ಲಿ ಅಲ್ಲ”, “ಇಂದಿನ ಮಕ್ಕಳು ಇಂದಿನ ಪ್ರಜೆಗಳು” ಹಾಗೂ “ಶಿಕ್ಷಣವೇ ಶಕ್ತಿ” ಎಂಬ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಅರಿವು ಮೂಡಿಸಿದರು.

ಬಳಿಕ ಮಕ್ಕಳ ಗುಂಪಿನ ಸದಸ್ಯರು ಹಾಗೂ ರೀಚ್ ಸಂಸ್ಥೆಯ ಸಿಬ್ಬಂದಿ ಸುಧಾ ಅವರ ನೇತೃತ್ವದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವರಿಕೆ ಮಾಡಲಾಯಿತು.

ರಾಜ್ಯ ಸರ್ಕಾರವು ಜೂನ್ ತಿಂಗಳನ್ನು ಬಾಲ ಕಾರ್ಮಿಕ ಪದ್ಧತಿ ವಿರುದ್ಧ ‘ಕ್ರಿಯಾಶೀಲ ತಿಂಗಳು’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಬಾಲ ಕಾರ್ಮಿಕ ಪದ್ಧತಿ ಹೆಚ್ಚಿರುವ ಪ್ರದೇಶಗಳಲ್ಲಿ ಜಂಟಿ ತಪಾಸಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ಕಾನೂನು ಜಾರಿ ಸಂಸ್ಥೆಗಳು, ಸಮುದಾಯ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ರೀಚ್ ಸಂಸ್ಥೆಯು ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್’ ಸಂಘಟನೆಯ ಪಾಲುದಾರ ಸಂಸ್ಥೆಯಾಗಿದ್ದು, ದೇಶಾದ್ಯಂತ ಮಕ್ಕಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು 250ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಕಳ್ಳಸಾಗಣೆ ಮತ್ತು ಬಾಲ ಕಾರ್ಮಿಕ ಪದ್ಧತಿ ಪರಸ್ಪರ ಸಂಬಂಧ ಹೊಂದಿರುವುದರಿಂದ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ತಳಮಟ್ಟದ ಸಂಸ್ಥೆಗಳು ಕಟ್ಟುನಿಟ್ಟಿನ ನಿಗಾ ವಹಿಸಿ, ರಕ್ಷಣಾ ಕಾರ್ಯಾಚರಣೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ರೀಚ್ ಸಂಸ್ಥೆಯ ನಿರ್ದೇಶಕರಾದ ಜಿ.ಎನ್. ಸಿಂಹ ಅವರು, “ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಪ್ರತಿಯೊಂದು ಮಗುವಿಗೂ ಶಿಕ್ಷಣ, ಸುರಕ್ಷತೆ ಹಾಗೂ ಘನತೆಯ ಹಕ್ಕು ಪುನಃಸ್ಥಾಪನೆಯಾಗುತ್ತದೆ. ಯಾವುದೇ ಮಗು ಕೆಲಸದ ಸ್ಥಳದಲ್ಲಿರಬಾರದು. ಪ್ರತಿಯೊಂದು ಮಗುವೂ ಶಾಲೆಯಲ್ಲಿರಬೇಕು. ಬಾಲ ಕಾರ್ಮಿಕ ಪದ್ಧತಿ ಮತ್ತು ಮಕ್ಕಳ ಕಳ್ಳಸಾಗಣೆಯನ್ನು ತಡೆಯಲು ಜಿಲ್ಲಾಡಳಿತ ಹಾಗೂ ಕಾನೂನು ಜಾರಿ ಇಲಾಖೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತೇವೆ” ಎಂದು ಹೇಳಿದರು.

ಜಾಗೃತಿ ಜಾಥಾದಲ್ಲಿ ಕೋನಪ್ಪ ಯಲ್ಲಪ್ಪ ಕಾಲನ್ನಣವರ, ಮಾಜಿ ಅಧ್ಯಕ್ಷರಾದ ಪಡಿಯಪ್ಪ ದುರ್ಗಪ್ಪ ಬೆಳ್ಳಿಗುಂಡಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಮುಖ್ಯಗುರುಗಳಾದ ಅಶೋಕ್ ಚವಾಣ್ ಹಾಗೂ ಉಮಾ ಮಾದರ್, ಬಾದಾಮಿ ಪೊಲೀಸ್ ಠಾಣೆಯ ಸಿಬ್ಬಂದಿ, ಮಕ್ಕಳ ಸಹಾಯವಾಣಿಯ ಶಾರದಾ ಭಜಂತ್ರಿ, ಮಕ್ಕಳ ಗುಂಪಿನ ಪ್ರತಿನಿಧಿಗಳಾದ ನಿಂಗಮ್ಮ ಮತ್ತು ಈಶ್ವರಿ, ರೀಚ್ ಸಂಸ್ಥೆಯ ನಿರ್ದೇಶಕರಾದ ಜಿ.ಎನ್. ಸಿಂಹ, ಸಿಬ್ಬಂದಿ ಸುಧಾ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp:

https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *