IPL 2023: ಬೆಂಗಳೂರಿಗೆ ಬಂತು ಐಪಿಎಲ್ 2023 ಟ್ರೋಫಿ: ಪ್ರದರ್ಶನಕ್ಕೆ ಇಟ್ಟಿರುವ ಸ್ಥಳ ಎಲ್ಲಿ ಗೊತ್ತೇ?

IPL 2023 Trophy

ಇಡೀ ಜಗತ್ತೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿ ಆರಂಭಕ್ಕೆ ಇನ್ನೇನು ಐದು ದಿನಗಳಷ್ಟೇ ಬಾಕಿಯಿದೆ. ಮಾರ್ಚ್ 31 ರಂದು ಈ ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲಿದ್ದು, ಬಿಸಿಸಿಐ ಅದ್ಧೂರಿ ಉದ್ಘಾಟನಾ ಸಮಾರಂಭ ಕೂಡ ಹಮ್ಮಿಕೊಂಡಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾಟ್ ಟೈಟಾನ್ಸ್ (GT vs CSK) ಮುಖಾಮುಖಿ ಆಗಲಿದೆ. ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈಗಾಗಲೇ ಬಹುತೇಕ ಎಲ್ಲ ಆಟಗಾರರು ಆರ್​ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಮೊದಲ ಪಂದ್ಯಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಕೂಡ ಶುರುಮಾಡಿಕೊಂಡಿದ್ದಾರೆ.

ಇದರ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಐಪಿಎಲ್ 2023 ಟ್ರೋಫಿಯ ಆಗಮನವಾಗಿದೆ. ಇಂದು ಮುಂಜಾನೆಯಿಂದ ಬೆಂಗಳೂರಿನಲ್ಲಿ ಐಪಿಎಲ್ ಕಪ್​ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಭಿಮಾನಿಗಳು ಇದರ ಜೊತೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ. ನಗರಗಳ ಆಯ್ದಭಾಗಗಳಲ್ಲಿ ಐಪಿಎಲ್‌ ಟ್ರೋಫಿ ಯಾತ್ರೆ ನಡೆಯಲಿದ್ದು ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ವಿವಿಧ ಕಡೆಗಳಲ್ಲಿ ಐಪಿಎಲ್‌ ಟ್ರೋಫಿಯನ್ನು ಸಾರ್ವಜನಿಕರು ನೋಡಬಹುದು.

IPL 2023: RCB ಸ್ಟಾರ್ ಆಟಗಾರ ಆರಂಭಿಕ ಪಂದ್ಯಗಳಿಗೆ ಅಲಭ್ಯ..?

ಬೆಳಿಗ್ಗೆ 5 ಗಂಟೆ ಯಿಂದ ನೈಸ್ ಟೋಲ್ ಗೇಟ್, ಹೊಸಕೆರೆ ಹಾಳುವಿನಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಟ್ರೋಪಿಯನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ನಂತರ ಮೈಯಾಸ್ ಜಯನಗರದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆ ವರೆಗೆ, ಕೋರಮಂಗಲದ ಫೋರಂ ಮಾಲ್ ನಲ್ಲಿ ಸಂಜೆ 5 ರಿಂದ 8ರವರೆಗೆ, ಅಂತಿಮವಾಗಿ 9 ರಿಂದ 11 ಗಂಟೆಗೆ ನಗರದ ವಿಶೇಷ ಸ್ಥಳದಲ್ಲಿ ಐಪಿಎಲ್ ಟ್ರೋಫಿಯನ್ನು ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಈಗಾಗಲೇ ಮುಂಬೈ, ಚೆನ್ನೈ, ವಿಶಾಖಪಟ್ಟಣದ ನಾಲ್ಕು ಪ್ರದೇಶಗಳಲ್ಲಿ ಟ್ರೋಫಿ ಪ್ರದರ್ಶನ ಯಶಸ್ವಿಯಾಗಿ ನಡೆದಿದೆ.

 

ಬೆಂಗಳೂರು 18ಕೆ ಮ್ಯಾರಥಾನ್​ಗೆ ಕೊಹ್ಲಿ ಚಾಲನೆ:

ಆರ್​ಸಿಬಿ ತಂಡದ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಂದು ಮುಂಜಾನೆ ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್​ ಬಳಿ 18ಕೆ ಮ್ಯಾರಥಾನ್​ಗೆ ಚಾಲನೆ ನೀಡಿದರು. ಇದು 18 ಕಿಲೋಮೀಟರ್,​​ 10 ಕಿ.ಮೀ. ಮತ್ತು 5 ಕಿ.ಮೀ. ಓಟದ ಮ್ಯಾರಥಾನ್ ಆಗಿದೆ. ನಮಸ್ಕಾರ ಬೆಂಗಳೂರು ಎಂದು ಮಾತು ಪ್ರಾರಂಭಿಸಿದ ವಿರಾಟ್ ಕೊಹ್ಲಿ, ಇಷ್ಟು ಜನ ಸೇರಿರೋದು ನೋಡಿದ್ರೆ ತುಂಬಾ ಖುಷಿಯಾಗುತ್ತೆ. ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದರು. ವಿರಾಟ್ ಕೊಹ್ಲಿ ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಕೊಹ್ಲಿ ಆಗಮಿಸುತ್ತಿದ್ದಂತೆ ಆಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಹಸರಂಹ-ಪಟಿದಾರ್ ಅಲಭ್ಯ:

ಐಪಿಎಲ್ 2023 ಟೂರ್ನಿ ಹತ್ತಿರುವಾಗುತ್ತಿದ್ದಂತೆ ಆರ್​ಸಿಬಿ ತಂಡಕ್ಕೆ ಆಘಾತ ಉಂಟಾಗುತ್ತಿದೆ. ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಸಂಪೂರ್ಣ ಫಿಟ್​ ಆಗಿಲ್ಲ ಎಂಬ ಸುದ್ದಿ ಬೆನ್ನಲ್ಲೇ, ಇದೀಗ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟಿದಾರ್ ಪಾದದ ನೋವಿನಿಂದ ಬಳಲುತ್ತಿದ್ದು, ಮೂರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಅವರು ಐಪಿಎಲ್​ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ರಜತ್ ಸದ್ಯ ಬೆಂಗಳೂರಿನ ಎನ್‌ಸಿಎಯಲ್ಲಿ ಶುಶ್ರೂಷೆಯಲ್ಲಿದ್ದಾರೆ. ಅಂತೆಯೆ ಸ್ಪಿನ್ನರ್ ವನಿಂದು ಹಸರಂಗ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಹಸರಂಗ ಸದ್ಯ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡುತ್ತಿದ್ದಾರೆ. ಹೀಗಾಗಿ ಅವರು ಏಪ್ರಿಲ್ 2 ರೊಳಗೆ ತಂಡವನ್ನು ಕೂಡಿಕೊಳ್ಳುವುದು ಅನುಮಾನ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-trophy-came-to-bengaluru-rcb-home-ground-do-you-know-where-the-exhibition-is-vb-au48-543192.html

Views: 0

Leave a Reply

Your email address will not be published. Required fields are marked *