“Dr BR Ambedkar Jayanti 2026:“ಶಿಕ್ಷಣವೇ ಸಮಾನತೆಯ ಅಸ್ತ್ರ: ಅಂಬೇಡ್ಕರ್ ಸಂದೇಶಕ್ಕೆ ಸ್ವಾಮೀಜಿಗಳ ಒತ್ತಾಯ”.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 14

ಆಧುನಿಕ ಭಾರತದ ಬಹುಮುಖ ಪ್ರತಿಭೆ ಡಾ.ಬಿ.ಆರ್ ಅಂಬೇಡ್ಕರ್. ಅವರು ಒಂದೇ ಜಾತಿ, ಹಾಗೂ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ, ಆಧುನಿಕ ಭಾರತದ ಸರ್ವತೋಮುಖ ಬೆಳವಣಿಗೆಯ ಶಕ್ತಿಯಾಗಿ ನಿಂತವರು. ಇಡೀ ರಾಷ್ಟ್ರದ ಭವಿಷ್ಯಕ್ಕೆ ಶಕ್ತಿಯಾಗಿ ನಿಂತ ವ್ಯಕ್ತಿಯೇ ಅಂಬೇಡ್ಕರ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಅಂಬೇಡ್ಕರ್ ವ್ಯಕ್ತಿತ್ವವು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೆ, ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಅವರು ರಾಷ್ಟ್ರೀಯತಾವಾದಿಯಾಗಿ ದೇಶದ ಏಕತೆಗಾಗಿ ಶ್ರಮಿಸಿದರೆ, ಕಾನೂನು ತಜ್ಞರಾಗಿ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಸ್ಥಾಪಿಸಿದರು. ರಾಜಕೀಯ ನಾಯಕನಾಗಿ ಅವರು ಜನತಾಂತ್ರಿಕ ಮೌಲ್ಯಗಳನ್ನು ಬಲಪಡಿಸಿದರು. ಜೊತೆಗೆ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಇತಿಹಾಸಕಾರ ಮತ್ತು ತತ್ತ್ವಜ್ಞಾನಿಯಾಗಿ ಅವರು ಸಮಾಜದ ಮೂಲಭೂತ ಸಮಸ್ಯೆಗಳ ಕುರಿತು ಆಳವಾದ ಚಿಂತನೆಗಳನ್ನು ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರು ಮಾನವಶಾಸ್ತ್ರಜ್ಞರಾಗಿ ಹಾಗೂ ಅರ್ಥಶಾಸ್ತ್ರಜ್ಞರಾಗಿ ಭಾರತದ ಸಾಮಾಜಿಕ ಮತ್ತು ಆರ್ಥಿಕ ರಚನೆಗಳನ್ನು ವಿಶ್ಲೇಷಿಸಿದರು. ಬರಹಗಾರರಾಗಿ ಅನೇಕ ಮಹತ್ವದ ಕೃತಿಗಳನ್ನು ರಚಿಸಿದರೆ, ವಾಕ್ಪಟುವಾಗಿ ತಮ್ಮ ಭಾಷಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇದಲ್ಲದೆ, ಕ್ರಾಂತಿಕಾರಿಯಾಗಿ ಅವರು ಅನ್ಯಾಯಗಳ ವಿರುದ್ಧ ಹೋರಾಡಿ, ಸಮಾನತೆಗಾಗಿ ಬದ್ಧತೆಯನ್ನು ತೋರಿಸಿದರು. ಸಂವಿಧಾನದ ಪ್ರಮುಖ ಶಿಲ್ಪಿಯಾಗಿ ಅವರು ಆಧುನಿಕ ಭಾರತದ ಬಲವಾದ ಅಡಿಪಾಯವನ್ನು ನಿರ್ಮಿಸಿದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ ಅಂಬೇಡ್ಕರ್ ಅವರ ಸಂದೇಶವನ್ನು ಕೇವಲ ಇತಿಹಾಸದ ಭಾಗವಾಗಿ ನೋಡದೆ, ಪ್ರಾಯೋಗಿಕವಾಗಿ ಅನುಸರಿಸುವುದು ಇಂದಿನ ಸಮಾಜದ ಅಗತ್ಯವಾಗಿದೆ.ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾರಿದ ಸಾಮಾನತೆ ತತ್ವಗಳು ಇಂದಿಗೂ ದೇಶದ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. ಸಮಾಜದಲ್ಲಿ ನಿಜವಾದ ಪ್ರಗತಿ ಸಾಧ್ಯವಾಗಬೇಕಾದರೆ ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳು ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳು ದೊರಕಬೇಕು ಎಂದು ಒತ್ತಾಯಿಸಿ ಅಂಬೇಡ್ಕರ್ ಅವರ ಸಾಮಾಜಿಕ ಪ್ರಜಾಸತ್ತಾತ್ಮಕತೆ ಕಲ್ಪನೆ, ಸಮಾನತೆ, ಸಹೋದರತ್ವ ಮತ್ತು ಸ್ವಾತಂತ್ರ್ಯದ ಸಮತೋಲನ ಇಂದಿನ ಕಾಲದಲ್ಲೂ ಅನಿವಾರ್ಯವಾಗಿದೆ. ಸಮಾಜದಲ್ಲಿ ಇನ್ನೂ ಅಸಮಾನತೆಗಳಿರುವ ಸಂದರ್ಭದಲ್ಲಿ, ಅವರ ಆಲೋಚನೆಗಳು ಹೊಸ ಪೀಳಿಗೆಗೆ ದಿಕ್ಕು ತೋರಿಸುತ್ತಿವೆ ಎಂದರು.

ಮಡಿವಾಳ ಗುರುಪೀಠದ ಮಾಚಿದೇವ ಶ್ರೀಗಳು ಮಾತನಾಡಿ ಅಂಬೇಡ್ಕರ್ ಅವರ ಜೀವನವೇ ಶಿಕ್ಷಣದ ಶಕ್ತಿಗೆ ಜೀವಂತ ಉದಾಹರಣೆ. ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ 32ಕ್ಕಿಂತ ಹೆಚ್ಚು ಉನ್ನತ ವಿದ್ಯಾಭ್ಯಾಸ ಪದವಿಗಳನ್ನು ಪಡೆದರು. ಶಿಕ್ಷಣವು ವ್ಯಕ್ತಿಯ ಹಾಗೂ ಸಮಾಜದ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಸಾಧನವಾಗಿದೆ. ಡಾ. ಅಂಬೇಡ್ಕರ್ ಅವರು `ಶಿಕ್ಷಣ ಪಡೆಯಿರಿ, ಸಂಘಟಿತರಾಗಿರಿ, ಹೋರಾಡಿರಿ ಎಂಬ ಘೋಷಣೆಯ ಮೂಲಕ ಶಿಕ್ಷಣದ ಮಹತ್ವವನ್ನು ಜನಸಾಮಾನ್ಯರಿಗೆ ಸಾರಿದರು. ಅವರ ನಂಬಿಕೆಯಲ್ಲಿ, ಶಿಕ್ಷಣವೇ ಅಜ್ಞಾನ ಮತ್ತು ಸಾಮಾಜಿಕ ಅಸಮಾನತೆಗಳಿಂದ ಮುಕ್ತಿಗೊಳ್ಳುವ ದಾರಿ. ಸಮಾಜದಲ್ಲಿ ಸಮಾನತೆ ಸ್ಥಾಪನೆಗೆ ಶಿಕ್ಷಣವೇ ಬಲವಾದ ಅಸ್ತ್ರ . ಶಿಕ್ಷಣವು ಕೇವಲ ಜ್ಞಾನ ಪಡೆಯುವ ಸಾಧನವೇ ಅಲ್ಲ, ಅದು ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಸಮಾನತೆಯ ಮಾರ್ಗವಾಗಿದೆ ಎಂದು ಹೇಳಿದರು.

ಶಿಕಾರಿಪುರ ವಿರಕ್ತಮಠದ ಚನ್ನಬಸವ ಶ್ರೀಗಳು ಮಾತನಾಡಿ ಮಹಿಳೆಯರ ಪ್ರಗತಿಯಿಲ್ಲದೆ ಸಮಾಜದ ಪ್ರಗತಿ ಸಾಧ್ಯವಿಲ್ಲ ಎಂಬ ಸಂದೇಶವನ್ನು ಅಂಬೇಡ್ಕರ್ ನೀಡಿದರು. ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರ ಸಾಮಾಜಿಕ ಮತ್ತು ಕಾನೂನುಬದ್ಧ ಸ್ಥಾನವನ್ನು ಬಲಪಡಿಸಲು ಮಹತ್ವದ ಪ್ರಯತ್ನವಹಿಸಿದ್ದರು. ಸ್ತ್ರೀ ಪರವಾದ ಚಿಂತನೆಗಳು ಮಹಿಳಾ ಸಬಲೀಕರಣಕ್ಕೆ ದಾರಿದೀಪವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊರಟಗೆರೆ ಶ್ರೀಕಾಶಿ ಅನ್ನಪೂರ್ಣೇಶ್ವರಿ ಮಠದ ಬಸವ ಮಹಾಲಿಂಗ ಶ್ರೀಗಳು ಮಾತನಾಡಿ ಅಂಬೇಡ್ಕರ್ ಅವರು ಕಾರ್ಮಿಕರನ್ನು ಕೇವಲ ಕೆಲಸಗಾರರಾಗಿ ಅಲ್ಲ, ಸಮಾಜದ ಅಭಿವೃದ್ಧಿಗೆ ಪ್ರಮುಖ ಶಕ್ತಿಯೆಂದು ಕಂಡಿದ್ದರು. ಕಾರ್ಮಿಕ ವರ್ಗದ ಸಂಕಷ್ಟಗಳನ್ನು ಅರಿತು, ಅವರ ಜೀವನಮಟ್ಟವನ್ನು ಸುಧಾರಿಸಲು ಹಲವು ಕಾನೂನು ಮತ್ತು ನೀತಿಗಳನ್ನು ರೂಪಿಸಿದರು. ವಿಶೇಷವಾಗಿ ಕಾರ್ಮಿಕರಿಗೆ ನ್ಯಾಯಸಮ್ಮತ ಕೆಲಸದ ಪರಿಸರ ಮತ್ತು ಹಕ್ಕುಗಳನ್ನು ಒದಗಿಸಲು ಒತ್ತಾಯಿಸಿದರು ಎಂದು ತಿಳಿಸಿದರು.

ಹೆಳವ ಗುರುಪೀಠದ ಬಸವ ಬೃಂಗೇಶ್ವರ ಸ್ವಾಮೀಜಿ ಮಾತನಾಡಿ ಒಬ್ಬ ವ್ಯಕ್ತಿಗೆ ಒಂದು ಮತ ಮಾತ್ರ ಸಾಲದು, ಒಬ್ಬ ವ್ಯಕ್ತಿಗೆ ಒಂದು ಮೌಲ್ಯ ಎಂಬ ತತ್ವ ಆರ್ಥಿಕ ವ್ಯವಸ್ಥೆಯಲ್ಲಿಯೂ ಪ್ರತಿಫಲಿಸಬೇಕು ಎಂಬ ಅವರ ನಿಲುವು ಇಂದಿನ ಅಸಮಾನತೆ ಚರ್ಚೆಗಳಲ್ಲಿ ಮರುಪ್ರಸ್ತುತವಾಗಿದೆ ಎಂದರು.

Leave a Reply

Your email address will not be published. Required fields are marked *