ಮುಂಬೈನ ಅಂಬಾನಿ ಆಸ್ಪತ್ರೆಯಲ್ಲಿ ಪಂತ್​ಗೆ ಚಿಕಿತ್ಸೆ! ಡೆಹ್ರಾಡೂನ್​ನಿಂದ ಏರ್​ ಲಿಫ್ಟ್; ಮಾಹಿತಿ ನೀಡಿದ ಬಿಸಿಸಿಐ

Rishabh Pant Health Update rishabh pant shifted to mumbai kokilaben hospital

ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯಿಂದ ಉತ್ತರ ಖಂಡದ ಹರಿದ್ವಾರದಲ್ಲಿರುವ ರೂರ್​ಕೀಯಲ್ಲಿರುವ ತನ್ನ ಮನೆಗೆ ರಿಷಭ್ ಪಂತ್ ಬರುವಾಗ ಈ ಅಪಘಾತ ಸಂಭವಿಸಿತ್ತು. ಬಳಿಕ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ (Max Hospital) ಸೇರಿಸಲಾಗಿತ್ತು. ಕಳೆದ ಐದು ದಿನಗಳಿಂದ ಇಲ್ಲಿಯೇ ಚಿಕಿತ್ಸೆ ಪಡೆದಿದ್ದ ಪಂತ್ ಆರೋಗ್ಯ ಕೊಂಚ ಸುದಾರಿಸಿತ್ತು. ಆದರೆ ಮೊಣಕಾಲು ನೋವು ಮಾತ್ರ ಕಡಿಮೆಯಾಗಿರಲಿಲ್ಲ. ಹೀಗಾಗಿ ಅವರನ್ನು ಡೆಹ್ರಾಡೂನ್​ನಿಂದ ಮುಂಬೈಗೆ ಶಿಫ್ಟ್ ಮಾಡುವುದಾಗಿ ಇಂದು ಬೆಳಿಗ್ಗೆ ಡಿಡಿಸಿಎ (DDCA) ಮುಖ್ಯಸ್ಥರು ಹೇಳಿಕೆ ನೀಡಿದ್ದರು. ಇದೀಗ ಪಂತ್​ ಅವರನ್ನು ಮುಂಬೈಗೆ ಏರ್​ಲಿಫ್ಟ್ ಮಾಡುವ ಬಗ್ಗೆ ಬಿಸಿಸಿಐ (BCCI) ಕೂಡ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಪಂತ್ ಅವರನ್ನು ಡೆಹ್ರಾಡೂನ್‌ನಿಂದ ಮುಂಬೈಗೆ ಸ್ಥಳಾಂತರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಬಿಸಿಸಿಐ, ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದೆ. ಅಲ್ಲದೆ ಈಗಾಗಲೇ ಪಂತ್ ಅವರನ್ನು ಮ್ಯಾಕ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿದ್ದು, ಪಂತ್ ಅವರ ಕುಟುಂಬ ಸದಸ್ಯರು ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಯಿಂದ ಹೊರಗೆ ಕರೆದೊಯ್ಯುತ್ತಿರುವ ಕೆಲವು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಿಸಿಸಿಐ ಹೇಳಿಕೆಯಲ್ಲಿ ಏನಿದೆ?

ಬಿಸಿಸಿಐ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಪಂತ್ ಅವರನ್ನು ಮುಂಬೈಗೆ ವಿಮಾನದಲ್ಲಿ ಏರ್​ಲಿಫ್ಟ್ ಮಾಡಲಾಗುವುದು ಎಂದು ತಿಳಿಸಿದೆ. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಡಾ.ದಿನ್ಶಾ ಪರಾಡಿವಾಲಾ ಅವರಿಗೆ ಚಿಕಿತ್ಸೆ ನೀಡಲಿದ್ದಾರೆ. ಕೋಕಿಲಾಬೆನ್ ಆಸ್ಪತ್ರೆಯಲ್ಲಿರುವ ಸೆಂಟರ್ ಫಾರ್ ಸ್ಪೋರ್ಟ್ಸ್ ಮೆಡಿಸಿನ್‌ನ ಅಧ್ಯಕ್ಷ ಡಾ.ದಿನ್‌ಶಾ ಅವರು ರಿಷಬ್ ಪಂತ್​ಗೆ ಅಸ್ಥಿರಜ್ಜು ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ನಂತರ ಪಂತ್ ಅವರನ್ನು ಬಿಸಿಸಿಐ ವೈದ್ಯಕೀಯ ತಂಡದಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಅಲ್ಲದೆ ರಿಷಬ್ ಅವರ ಚಿಕಿತ್ಸೆ ಮತ್ತು ಚೇತರಿಕೆಯ ಸಂಪೂರ್ಣ ಜವಾಬ್ದಾರಿ ಮತ್ತು ವೆಚ್ಚವನ್ನು ಮಂಡಳಿಯೇ ಭರಿಸುತ್ತಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಅಪಘಾತ ಸಂಭವಿಸಲು ಕಾರಣವೇನು?

ವಾಸ್ತವವಾಗಿ ಕಳೆದ ಡಿಸೆಂಬರ್​ನಲ್ಲಿ ಬಾಂಗ್ಲಾ ಪ್ರವಾಸ ಮುಗಿಸಿದ್ದ ಪಂತ್ ಕ್ರಿಸ್​ಮಸ್ ಆಚರಿಸಲು ಸೀದಾ ದುಬೈಗೆ ಹಾರಿದ್ದರು. ಅಲ್ಲಿ ಮಾಜಿ ನಾಯಕ ಧೋನಿ ಕುಟುಂಬದೊಂದಿಗೆ ಕ್ರಿಸ್​ಮಸ್​ ಕೂಡ ಆಚರಿಸಿ ಭಾರತಕ್ಕೆ ವಾಪಸ್ಸಾಗಿದ್ದರು. ಬಳಿಕ ಕುಟುಂಬದೊಂದಿಗೆ ಹೊಸವರ್ಷವನ್ನು ಆಚರಿಸುವ ಸಲುವಾಗಿ ಪಂತ್, ದೆಹಲಿಯಿಂದ ರೂರ್ಕಿಗೆ ತೆರಳುತ್ತಿದ್ದಾಗ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಗಿತ್ತು. ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ಇದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆಯಿತು ಎಂದು ಪಂತ್ ಹೇಳಿಕೆ ನೀಡಿದ್ದರು. ಈ ಅಪಘಾತದಲ್ಲಿ ಪಂತ್ ಅವರ ಹಣೆಯ ಮೇಲೆ ಮೂಗೇಟುಗಳು, ಬೆನ್ನುಮೂಳೆಗೆ ಗಂಭೀರ ಗಾಯಗಳ ಜೊತೆಗೆ ಅವರ ಮೊಣಕಾಲು ಮತ್ತು ಕಣಕಾಲುಗಳಿಗೆ ಗಾಯಗಳಾಗಿದ್ದವು. ಹೀಗಾಗಿ ಪಂತ್ ಬಿಸಿಸಿಐನಿಂದ ಕೇಂದ್ರೀಯ ಗುತ್ತಿಗೆ ಪಡೆದ ಕ್ರಿಕೆಟಿಗನಾಗಿರುವುದರಿಂದ ಅವರ ಸಂಪೂರ್ಣ ಚಿಕಿತ್ಸೆಯ ಜವಬ್ದಾರಿಯನ್ನು ಬಿಸಿಸಿಐ ಹೊತ್ತುಗೊಂಡಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಪಂತ್ ಅವರನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದೆ.

source https://tv9kannada.com/sports/cricket-news/rishabh-pant-health-update-rishabh-pant-shifted-to-mumbai-kokilaben-hospital-psr-au14-495741.html

Leave a Reply

Your email address will not be published. Required fields are marked *