ಮಾಸಿಕ ಪಿಂಚಣಿ ಮೂರರಿಂದ ಐದು ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಜ.17): ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ವಯೋವೃದ್ದರು, ಅಂಗವಿಕಲರು, ವಿಧವೆಯರಿಗೆ, ಕಲಾವಿದರಿಗೆ ನೀಡಲಾಗುತ್ತಿರುವ ಮಾಸಿಕ ಪಿಂಚಣಿ ಮೂರು ಸಾವಿರ ರೂ.ಗಳನ್ನು ಐದು ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಬಡವರ ಜೀವನ ಕಷ್ಠವಾಗಿದೆ. ಹಾಗಾಗಿ ಮಾಶಾಸನ ಹೆಚ್ಚಳಕ್ಕಾಗಿ ಈ ಬಾರಿಯ ಬಜೆಟ್‍ನಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರದ ಹಲವಾರು ಕೊಳಚೆ ಪ್ರದೇಶಗಳಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಉಪವಿಭಾಗ ಅಧಿಕಾರಿಗಳು ಹಕ್ಕುಪತ್ರಗಳನ್ನು ನೀಡಿದ್ದು, ಸರ್ಕಾರ ನಿಗಧಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಾಗಿ ಪ್ರತಿಯೊಂದು ಕುಟುಂಬದಿಂದ ಒಂದು ಸಾವಿರ ರೂ.ಗಳನ್ನು ಅಧಿಕವಾಗಿ ವಸೂಲಿ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಕೂಡಲೆ ಹಣ ವಾಪಸ್ ಕೊಡಿಸುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು.

ನಗರದ ಹದಿನೇಳನೆ ವಾರ್ಡ್ ವ್ಯಾಪ್ತಿಯ ಆಶ್ರಯ ಬಡಾವಣೆಯ ಒಂದು ಮತ್ತು ಎರಡನೆ ಲೇಔಟ್‍ನಲ್ಲಿ ನಿರ್ಮಿಸಿರುವ ಮನೆಗಳಲ್ಲಿ ಇಪ್ಪತ್ತು ವರ್ಷಗಳಿಂದ ವಾಸವಿರುವವರಿಗೆ ಹಿಂದಿನ ಸರ್ಕಾರ ಸಾಲ ಮನ್ನ ಮಾಡಿರುವ ತೀರುವಳಿ ಪತ್ರವನ್ನು ನೀಡಬೇಕು. ನಗರಸಭೆಯಿಂದ ಇ.ಸ್ವತ್ತು ನೀಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರತಿಭಟನಾಕಾರರು ವಿನಂತಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ನಮ್ಮ ರಾಜ್ಯದ ನಂದಿನಿ ಹಾಲನ್ನು ಗುಜರಾತ್ ಸರ್ಕಾರದ ಅಮೂಲ್ ಹಾಲಿನ ಒಕ್ಕೂಟಕ್ಕೆ ಸೇರಿಸಲು ಚಿಂತನೆ ನಡೆಸುತ್ತಿರುವುದು ನಮ್ಮ ರಾಜ್ಯಕ್ಕೆ ನಿಜವಾಗಿಯೂ ಅವಮಾನ ಮಾಡಿದಂತಾಗುತ್ತಿದೆ. ಸರ್ಕಾರ ಕೂಡಲೆ ಈ ನಿರ್ಧಾರದಿಂದ ಹಿಂದೆ ಸರಿಯಬೇಕು.

ಅದೇ ರೀತಿ ರಾಜ್ಯ ಸರ್ಕಾರ ವಯೋವೃದ್ದರು, ಅಂಗವಿಕಲರು, ವಿಧವೆಯರು, ಕಲಾವಿದರಿಗೆ ಕೊಡುತ್ತಿರುವ ಮಾಶಾಸನವನ್ನು ಹೆಚ್ಚಿಸುವಂತೆ ಒತ್ತಾಯಿಸಿದರು.

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಎನ್.ರಂಗಸ್ವಾಮಿ, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್, ಮೈಲಾರಪ್ಪ, ಅಯೂಬ್‍ಖಾನ್, ಇಮಾಂಸಾಬ್, ರುದ್ರಮುನಿ, ರತ್ನಮ್ಮ, ಲೀಲಾವತಿ, ಸರೋಜಮ್ಮ, ಶಬೀನಾಭಾನು, ಮಂಜುನಾಥ ಅಂಗವಿಕಲ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಾರುತಿ, ಉಪಾಧ್ಯಕ್ಷ ಕೆ.ಹೆಚ್.ಜಯಪ್ರಕಾಶ್, ಖಜಾಂಚಿ ತಿಪ್ಪೇಸ್ವಾಮಿ, ನ್ಯಾಯವಾದಿ ಫೈಜಾನುಲ್ಲಾ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

The post ಮಾಸಿಕ ಪಿಂಚಣಿ ಮೂರರಿಂದ ಐದು ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/KWHR2Mc
via IFTTT

Leave a Reply

Your email address will not be published. Required fields are marked *