ಚಿತ್ರದುರ್ಗ ಜು. 24
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಐತಿಹಾಸಿಕ ಚಿತ್ರದುರ್ಗದಲ್ಲಿ ಸರ್ಕಾರದಿಂದ ದುರ್ಗೋತ್ಸವ ಕಾರ್ಯಕ್ರಮವನ್ನು ಸರ್ಕಾರ ಕೂಡಲೇ ದಿನಾಂಕ ನಿಗಧಿಪಡಿಸಿ ಆಚರಿಸುವ ಅಗ್ರಹಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಕೆ.ಕೆ.ಎನ್. ಎಸ್.ಎಸ್. ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಒತ್ತಾಯಿಸಿದೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ಏಕಾಂಗಿಯಾಗಿ ಪ್ರತಿಭಟನೆಯನ್ನು ಮಾಡಿದ ಕೆ.ಕೆ.ಎನ್.ಎಸ್.ಎಸ್. ಜಿಲ್ಲಾ ಸಮಿತಿಯ ಅಧ್ಯಕ್ಷ ಗಣೇಶ್ ಚಿತ್ರದುರ್ಗವು ಐತಿಹಾಸಿಕ ರಾಜ-ಮಹಾರಾಜರು ಆಳಿದಂತಹ ಜಿಲ್ಲೆಯಾಗಿದ್ದು, ಇತಿಹಾಸವಿರುವ ರಾಜವೀರಮದಕರಿನಾಯಕರು, ಒನಕೆ ಓಬವ್ವ ಆಳಿದ ನಾಡಿದು. ಚಿತ್ರದುರ್ಗ ಜಿಲ್ಲೆಯಲ್ಲಿ ಕೋಟೆ ನಾಡು ಎಂದು ಹೆಸರು ಆಗಿದ್ದು, ಏಳುಸುತ್ತಿನ ಕೋಟೆಗೆ ದೇಶ-ವಿದೇಶಗಳಿಂದ ಸಾವಿರಾರು ಜನರು ಪ್ರತಿದಿನ ಕೋಟೆಯನ್ನು ಮತ್ತು ಪತಿಹಾಸಿಕವುಳ್ಳ ಚಂದ್ರವಳ್ಳಿ, ಜೋಗಿಮಟ್ಟಿ ಅರಣ್ಯಧಾಮ, ಮುರುಘಾಮಠ ಇನ್ನಿತರೆ ಪ್ರವಾಸಿತಾಣಗಳನ್ನು ವೀಕ್ಷಿಸಲು ಬರುತ್ತಾರೆ.
ಕರ್ನಾಟಕ ಸರ್ಕಾರದಿಂದ ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು ಉತ್ಸವ, ಕಿತ್ತೂರು ಉತ್ಸವ, ಈ ರೀತಿ ಕೆಲವು ಜಿಲ್ಲೆಗಳಲ್ಲಿ ಇತಿಹಾಸವುಳ್ಳ ಹೆಸರುಗಳ ಮೇಲೆ ಉತ್ಸವಗಳನ್ನು ಸರ್ಕಾರವೇ ಆಚರಿಸುತ್ತಾ ಬಂದಿರುತ್ತದೆ. ಆದರೆ ಐತಿಹಾಸಿಕ ಚಿತ್ರದುರ್ಗವನ್ನು ರಾಜ ಮಹರಾಜರು ಆಳಿದ್ದು, ಇತಿಹಾಸ ಇರುವ ಚಿತ್ರದುರ್ಗದಲ್ಲಿ ದುರ್ಗೋತ್ಸವ ಕಾರ್ಯಕ್ರಮವನ್ನು ಶ್ರೀ ಹೆಚ್.ಆಂಜನೇಯ ಸಚಿವರಾಗಿದ್ದ ಸಮಯದಲ್ಲಿ 1-2 ಬಾರಿ ಮಾತ್ರ ಆಚರಿಸಿ, ನಂತರ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರ ಈ ಬಗ್ಗೆ ಗಮನ ಹರಿಸದೇ ಚಿತ್ರದುರ್ಗವನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮುಖ್ಯವಾಗಿ ಐತಿಹಾಸಿಕ ಕೋಟೆ, ಮುರುಘಾಮಠ, ವಿ.ವಿ.ಸಾಗರ, ನಾಯಕನಹಟ್ಟಿ ಇಂತಹ ಪ್ರಮುಖ ಸ್ಥಳಗಳನ್ನು ಹೊಂದಿರುವ ಜಿಲ್ಲೆಯಾಗಿದ್ದು, ನಮ್ಮ ಕೋಟೆಯು ಐತಿಹಾಸಿಕವಾಗಿ ದೇಶದಲ್ಲಿ ಹೆಸರು ಮಾಡಿರುವಂತಹ ಕೋಟೆಯಾಗಿದೆ. ರಾಜ ಮಹರಾಜರು ಆಳಿದ ಕೋಟೆಯಾಗಿದ್ದು, ಪ್ರತಿದಿನ ಕೋಟೆ ಮತ್ತು ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶದ ಮೂಲೆ ಮೂಲೆಯಿಂದ ಮತ್ತು ಹೊರ ದೇಶದ ಪ್ರವಾಸಿಗರು ಬಂದು ವೀಕ್ಷಣೆ ಮಾಡುತ್ತಿರುತ್ತಾರೆ. ಈ ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಲು ವರ್ಷಕ್ಕೊಮ್ಮೆ ಐತಿಹಾಸಿಕ “ದುರ್ಗೋತ್ಸವ” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾಡಿದರೆ ಇನ್ನು ಹೆಚ್ಚಿನದಾಗಿ ಪ್ರವಾಸಿತಾಣಗಳು ಅಭಿವೃದ್ಧಿ ಹೊಂದಲು ಮತ್ತು ಪ್ರವಾಸಿಗರು ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಇನ್ನು ಹೆಚ್ಚಿನದಾಗಿ ವೀಕ್ಷಣೆ ಮಾಡಲು ಅವಕಾಶವಾಗುತ್ತದೆ.
ಚಿತ್ರದುರ್ಗದಲ್ಲಿ “ದುರ್ಗೋತ್ಸವ” ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಾದ ತಾವುಗಳು ಉದ್ಘಾಟಿಸಿ, ಪ್ರತಿವರ್ಷ ಮುಂದು ವರೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕೆಂದು ಕೆ.ಕೆ.ಎನ್.ಎಸ್.ಎಸ್. ಜಿಲ್ಲಾ ಸಮಿತಿಯ ಅಧ್ಯಕ್ಷ ಗಣೇಶ್ ಮನವಿ ಮಾಡಿದ್ದಾರೆ.