ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan) 22ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅಸ್ಸಾಂನ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 9.32 ಕೋಟಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂಪಾಯಿಯಂತೆ ಒಟ್ಟು 18,640 ಕೋಟಿ ರೂ.ಗಳನ್ನು ನೇರವಾಗಿ ಜಮೆ ಮಾಡಿದ್ದಾರೆ.
ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಕೆ ಗಮನಾರ್ಹ ಅಂಶವೆಂದರೆ, ಕಳೆದ 21ನೇ ಕಂತಿಗೆ ಹೋಲಿಸಿದರೆ ಈ ಬಾರಿ ಯೋಜನೆಯ ಲಾಭ ಪಡೆದವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 21ನೇ ಕಂತಿನಲ್ಲಿ 9,35,79,869 ರೈತರು ಆರ್ಥಿಕ ನೆರವು ಪಡೆದಿದ್ದರು. ಆದರೆ ಈ ಬಾರಿ ಸುಮಾರು 3.8 ಲಕ್ಷದಷ್ಟು ರೈತರಿಗೆ ಹಣ ಪಾವತಿಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣಗಳು:
- ಕಡ್ಡಾಯವಾಗಿರುವ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸದಿರುವುದು.
- ನಮೂದಿಸಿರುವ ದಾಖಲೆಗಳಲ್ಲಿನ ತಪ್ಪುಗಳು ಅಥವಾ ಅನರ್ಹತೆ.
ಪಿಎಂ ಕಿಸಾನ್ ಯೋಜನೆ ಎಂದರೇನು? ಇದು ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ಪ್ರತಿ ವರ್ಷ ಒಟ್ಟು 6,000 ರೂ.ಗಳನ್ನು ತಲಾ 2,000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (DBT) ವರ್ಗಾಯಿಸಲಾಗುತ್ತದೆ.
ನಿಮ್ಮ ಖಾತೆಗೆ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು? ನೀವು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು, 22ನೇ ಕಂತಿನ ಹಣ ಖಾತೆಗೆ ಜಮೆಯಾಗಿಲ್ಲದಿದ್ದರೆ, ತಕ್ಷಣವೇ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸುವುದು ಸೂಕ್ತ.
ಪಟ್ಟಿಯನ್ನು ಪರಿಶೀಲಿಸುವ ಸರಳ ಹಂತಗಳು ಇಲ್ಲಿವೆ:
- ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಸ್ವಲ್ಪ ಕೆಳಗೆ ಬಂದರೆ ಫಾರ್ಮರ್ಸ್ ಕಾರ್ನರ್ (Farmers Corner) ವಿಭಾಗ ಕಾಣಸಿಗುತ್ತದೆ.
- ಅಲ್ಲಿ ಬೆನಿಫಿಶಿಯರಿ ಲಿಸ್ಟ್ (Beneficiary List) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮದ ವಿವರಗಳನ್ನು ನಿಖರವಾಗಿ ಆಯ್ಕೆ ಮಾಡಿ.
- ಅಂತಿಮವಾಗಿ ‘ಗೆಟ್ ರಿಪೋರ್ಟ್’ ಕ್ಲಿಕ್ ಮಾಡಿದರೆ, ನಿಮ್ಮೂರಿನ ಎಲ್ಲಾ ಅರ್ಹ ಫಲಾನುಭವಿಗಳ ಸಂಪೂರ್ಣ ಪಟ್ಟಿ ಪರದೆಯ ಮೇಲೆ ಮೂಡುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಹೆಸರು ಪಟ್ಟಿಯಲ್ಲಿದ್ದು, ಇ-ಕೆವೈಸಿ ಆಗಿಲ್ಲದಿದ್ದರೆ, ಇದೇ ವೆಬ್ಸೈಟ್ ಮೂಲಕ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ಇ-ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬಹುದು.
